ದೃಶ್ಯ ವಾಹಿನಿ ಛಾಯಾಗ್ರಾಹಕ ನಂದಾ ಗುಜ್ಜರ್ ಆತ್ಮಹತ್ಯೆ
ಮಡಿಕೇರಿ, ಡಿ.18: ದೃಶ್ಯ ವಾಹಿನಿಗಳಲ್ಲಿ ಕ್ಯಾಮರಾಮೆನ್ ಆಗಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಂದಾ ಗುಜ್ಜರ್(50) ಅವರು ನಗರದ ತಮ್ಮ ಸ್ವಗೃಹದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಉಕ್ಕುಡದಲ್ಲಿನ ಶ್ರೀ ರಾಜರಾಜೇಶ್ವರಿ ಬಡಾವಣೆಯ ನಿವಾಸಿ ನಂದಾ ಗುಜ್ಜರ್ ಅವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಲೇಜಿನಿಂದ ಸಂಜೆ ಮಗ ಮನೆಗೆ ಮರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.
ನಂದಾ ಗುಜ್ಜರ್ ಅವರು ಉದಯ ದೃಶ್ಯ ವಾಹಿನಿಯ ಕ್ಯಾಮರಾ ಮೆನ್ ಆಗಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇವರು ಕೊಡಗು ಪ್ರೆಸ್ ಕ್ಲಬ್ನ ನಿರ್ದೇಶಕರಾಗಿಯೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶೋಭಾ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ತೀವ್ರ ಸಂತಾಪ
ನಂದಾ ಗುಜ್ಜರ್ ಅವರ ಸಾವಿಗೆ ಪತ್ರಿಕೆಗಳಲ್ಲಿ ಮತ್ತು ದೃಶ್ಯ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ ಹಾಗೂ ಛಾಯಾಗ್ರಾಹಕ ಬಳಗ ಅತೀವ ಸಂತಾಪವನ್ನು ಸೂಚಿಸಿದ್ದಾರೆ.
Next Story