ಹನೂರು ಪ್ರಸಾದ ದುರಂತ: ಆರೋಪಿ ಮಹಿಳೆಗೆ ವಿಷ ನೀಡಿದ ಕೃಷಿ ಅಧಿಕಾರಿಯ ವರ್ಗಾವಣೆ
ಚಾಮರಾಜನಗರ,ಡಿ.22: ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಮಿಶ್ರಣ ಮಾಡಲು ಅಂಬಿಕಾಳಿಗೆ ವಿಷ ನೀಡಿದ್ದರೆನ್ನಲಾದ ಕೃಷಿ ಅಧಿಕಾರಿಯನ್ನು ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷಹಾಕಲು ಅಂಬಿಕಾಳಿಗೆ ವಿಷದ ಬಾಟಲಿ ನೀಡಿ ಸಾಕ್ಷಿದಾರನಾಗಿರುವ ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಸುಳ್ವಾಡಿ ಕಿಚ್ಗುತ್ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು 17 ಜನರು ಸಾವನ್ನಪ್ಪಿ ಹಲವಾರು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಕಾರಣವಾದ ನಾಲ್ವರು ಆರೋಪಿಗಳಲ್ಲಿ 2ನೇ ಆರೋಪಿ ಅಂಬಿಕಾ ವಿಷದ ಬಾಟಲಿಯನ್ನು ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿಯವರಿಂದ ತರಿಸಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಳು. ಹೀಗಾಗಿ, ಸಿದ್ದಪ್ಪಸ್ವಾಮಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ನಡುವೆ ಸಿದ್ದಪ್ಪಸ್ವಾಮಿಯನ್ನು ರಾಮಾಪುರ ಆರ್ಎಸ್ಕೆಯಿಂದ ಕೇಂದ್ರ ಕಚೇರಿ ಬೆಂಗಳೂರಿಗೆ ವರ್ಗಾವಣೆ ಮಾಡಿ ಬಿಡುಗಡೆ ಮಾಡಲಾಗಿದೆ.