ದತ್ತಪೀಠ ಸಮಸ್ಯೆ ಪರಿಹಾರ ವಿಳಂಬಕ್ಕೆ ಕಾಂಗ್ರೆಸ್ ಸರಕಾರ ಕಾರಣ: ಸಿ.ಟಿ.ರವಿ ಆರೋಪ
ಚಿಕ್ಕಮಗಳೂರು, ಡಿ.22: ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ಆಗಬೇಕು, ಪೀಠದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರವೇ ಪೂಜೆ ಪುರಸ್ಕಾರಗಳು ನಡೆಯಬೇಕೆಂಬ ಬೇಡಿಕೆಗಳು ಈಡೇರುವ ವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಜಿಲ್ಲಾಡಳಿತ ಶನಿವಾರ ಗುರು ದತ್ತಾತ್ರೇಯ ಬಾಬಾ ಬುಡನ್ಗಿರಿಯಲ್ಲಿ ಹಮ್ಮಿಕೊಂಡಿದ್ದ ದತ್ತಜಯಂತಿ ಕಾರ್ಯಕ್ರಮದ ವೇಳೆ ಸಂಘಪರಿವಾರ ನಡೆಸಿದ ಧರ್ಮಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಆಗಬೇಕೆಂಬ ತಮ್ಮ ಬೇಡಿಕೆಗಳ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವನ್ನು ರಾಜ್ಯ ಸರಕಾರ ತನ್ನ ಅಂಗಳಕ್ಕೆ ತಂದಿತ್ತು. ಹಿಂದೆ ಹೈಕೋರ್ಟ್ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ಆಗಬೇಕೆಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ಈ ಸಂಬಂಧ ತೀರ್ಪು ನೀಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ, ವಿವಾದ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿತ್ತು. ಆದರೆ ಕಾಂಗ್ರೆಸ್ ಸರಕಾರ ನ್ಯಾಯಾಲಯಕ್ಕೆ ನೀಡಿದ ಮಾತಿಗೆ ತಪ್ಪಿ ನಡೆದಿದೆ ಎಂದು ರವಿ ಆರೋಪಿಸಿದರು.
ಕಾಂಗ್ರೆಸ್ ಸರಕಾರ ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಮೂಲಕ ವರದಿ ತಯಾರಿಸಿ ಅದನ್ನು ಒಪ್ಪಿಕೊಂಡಿದೆ. ಈ ವರದಿ ಹಿಂದುಗಳಿಗೆ ವಿರುದ್ಧವಾದ ವರದಿಯಾಗಿದ್ದು, ಹಾಲಿ ಸರಕಾರ ಈ ವರದಿಯನ್ನು ತಿರಸ್ಕಾರ ಮಾಡಬೇಕು. ತ್ವರಿತಗತಿಯಲ್ಲಿ ನ್ಯಾಯಾಲಯದಲ್ಲಾಗಲೀ ಅಥವಾ ನ್ಯಾಯಾಲಯದ ಹೊರಗಾದರೂ ಸರಿ ನ್ಯಾಯಾಲಯದ ದಾಖಲೆ, ಸರಕಾರಿ ದಾಖಲೆ, ಮುಜರಾಯಿ ದಾಖಲೆಗಳನ್ನು ಆಧರಿಸಿ ದರ್ಗಾ ಹಾಗೂ ದತ್ತ ಪೀಠ ಬೇರೆ, ಬೇರೆ ಎಂಬುದನ್ನು ಎತ್ತಿ ಹಿಡಿದು ಮುಸಲ್ಮಾನರಿಗೆ ದರ್ಗಾದ ದಾರಿಯನ್ನೂ ಹಿಂದುಗಳಿಗೆ ದತ್ತಪೀಠದ ದಾರಿಯನ್ನೂ ತೋರಿಸಬೇಕೆಂದು ಅವರು ಆಗ್ರಹಿಸಿದರು.
ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ಮುಸ್ಲಿಮರು ದತ್ತಪೀಠಕ್ಕೆ ಬರುವುದಕ್ಕೆ ತಮ್ಮ ವಿರೋಧವಿಲ್ಲ, ಅಂತೆಯೇ ಹಿಂದುಗಳು ದರ್ಗಾಕ್ಕೆ ಹೋಗುವುದಕ್ಕೂ ತಮ್ಮ ವಿರೋಧವಿಲ್ಲ. ಆದರೆ ಸರಕಾರಿ ದಾಖಲೆಗಳ ಪ್ರಕಾರ ಬಾಬಾ ಬುಡನ್ ದರ್ಗಾ ಮತ್ತು ದತ್ತಪೀಠ ಎರಡೂ ಒಂದೇ ಅಲ್ಲ ಎಂಬುದನ್ನು ಸರಕಾರ ಇಲ್ಲವೇ ನ್ಯಾಯಾಲಯ ಎತ್ತಿಹಿಡಿಯಬೇಕು. ಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಲೇ ಬೇಕೆಂದ ಸಿ.ಟಿ.ರವಿ, ಈ ಸಂಬಂಧ ಜನಪ್ರತಿನಿಧಿಗಳು, ಸ್ವಾಮೀಜಿಗಳೊಂದಿಗೆ ಸಿಎಂ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ನ್ಯಾಯಾಲದಲ್ಲಿ ಬಗೆಹರಿಯಲಿದ್ದ ಸಮಸ್ಯೆಯನ್ನು ಸರಕಾರ ಮಧ್ಯಪ್ರವೇಶಿಸಿ ತನ್ನ ಅಂಗಳಕ್ಕೆ ತಂದಿಟ್ಟುಕೊಂಡು ರಾಜಕೀಯ ಕಾರಣಕ್ಕೆ ಸಮಸ್ಯೆ ಬಗೆಹರಿಯದಂತೆ ಮಾಡಿರುವುದು ಸರಿಯಲ್ಲ. ಶೀಘ್ರ ಈ ಸಮಸ್ಯೆಗೆ ಮುಕ್ತಿ ಹಾಡಬೇಕು. ನ್ಯಾಯಾಲಯದಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು.