ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ನಲ್ಲಿ ಒಳಜಗಳ ಹೆಚ್ಚಾಗಿದೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಡಿ.25: ಸಚಿವ ಸಂಪುಟ ವಿಸ್ತರಣೆ ಆದ ಕೂಡಲೇ ಮೈತ್ರಿ ಸರಕಾರ ಬೀಳುತ್ತೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಹಾಗೆಯೇ ಒಳ ಜಗಳ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈಗ ಕಾಂಗ್ರೆಸ್ನಲ್ಲಿ ಒಳ ಜಗಳ ಹೆಚ್ಚಾಗುತ್ತಿದೆ. ನಾವು ಎಲ್ಲವನ್ನು ಕಾದು ನೋಡುತ್ತೇವೆ. ಇನ್ನೂ ಎರಡು ಮೂರು ದಿನಗಳಲ್ಲಿ ಸಾಕಷ್ಟು ಬೆಳವಣಿಗೆ ಆಗಬಹುದು. ಬಿಜೆಪಿ ಶಾಸಕರನ್ನು ಸೆಳೆದು ಸರಕಾರ ರಚಿಸುವಲ್ಲಿ ಉತ್ಸುಕವಾಗಿಲ್ಲ ಎಂದರು.
ರಮೇಶ ಜಾರಕಿಹೊಳಿಯವರ ಜತೆ ಎಷ್ಟು ಜನ ಶಾಸಕರು ಇದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಸರಕಾರ ರಚನೆ ಮಾಡುವುದರ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಇನ್ನು ಮದ್ದೂರಿನಲ್ಲಿ ಜೆಡಿಎಸ್ ಮುಖಂಡನ ಹತ್ಯೆ ಕುರಿತು ಸಿಎಂ ಕುಮಾರಸ್ವಾಮಿ ಶೂಟೌಟ್ ಹೇಳಿಕೆ ನೀಡಿದ್ದ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಭಾವನಾತ್ಮಕವಾಗಿ ಆದೇಶ ಮಾಡುವುದು ಸರಿಯಲ್ಲ. ಜೆಡಿಎಸ್ ಮುಖಂಡನ ಕೊಲೆಯಾಗಿದ್ದು ಖಂಡನೀಯ. ಕೊಲೆ ಮಾಡಿದ ಹಂತಕರಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳು ತಾಳ್ಮೆ ಕಾಪಾಡಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಸಿಎಂ ಮೊದಲು ಕಾನೂನು ಬಾಹಿರ ಹೇಳಿಕೆ ನೀಡುವುದು ಬಿಡಬೇಕು. ನಾನು ಕುಮಾರಸ್ವಾಮಿ ಆಗಿ ಹೇಳಿಕೆ ಕೊಟ್ಟಿದ್ದೇನೆ ಎನ್ನುತ್ತಾರೆ. ಕುಮಾರಸ್ವಾಮಿ ಬೇರೆ ಸಿಎಂ ಕುಮಾರಸ್ವಾಮಿ ಬೇರೆನಾ ಎಂದು ಪ್ರಶ್ನಿಸಿದರು.