ಚಿಕ್ಕಮಗಳೂರು: ವಿವಿಧ ಸಂಘಟನೆಗಳಿಂದ ಮಧುಕರ್ ಶೆಟ್ಟಿಗೆ ಭಾವಪೂರ್ಣ ಶ್ರದ್ಧಾಂಜಲಿ
ಚಿಕ್ಕಮಗಳೂರು,ಡಿ.29: ಐಪಿಎಸ್ ಅಧಿಕಾರಿಯಾಗಿ ವಿಶಿಷ್ಟ ಸೇವೆಯ ಮೂಲಕ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಶನಿವಾರ ನಗರದ ಆಜಾದ್ ಪಾರ್ಕ್ನಲ್ಲಿ ವಿವಿಧ ಸಂಘ ಸಂಸ್ಥೆಗಳು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದವು.
ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜಯಕರ್ನಾಟಕ ಸಂಘಟನೆ, ಕನ್ನಡ ಸೇನೆ ಕರ್ನಾಟಕ, ಕಲಾ ಸೇವಾ ಸಂಘ, ಕನ್ನಡ ಅಭಿಮಾನಿಗಳ ಸಂಘ, ಗಂಗಾಮತಸ್ಥರ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಶ್ರದ್ಧಾಂಜಲಿಯಲ್ಲಿ ಪಾಲ್ಗೊಂಡಿದ್ದವು.
ಮಧುಕರ್ ಶೆಟ್ಟಿ ಅವರ ಭಾವಚಿತ್ರ ಇಟ್ಟು, ಮೌನ ಆಚರಿಸಿ ನುಡಿ ನಮನಗಳ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಮಧುಕರ್ ಶೆಟ್ಟಿ ಅವರು ಮಾಡಿದ್ದ ಕಾರ್ಯ ಸಾಧನೆಗಳನ್ನು ಹೇಳಿ ಕೊಂಡಾಡಿದರು.
ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಸ್ಥಾಪಕ ಅಧ್ಯಕ್ಷ ಬಿ.ಎಂ.ಕುಮಾರ್, ಗೌರವ ಅಧ್ಯಕ್ಷ ಎಲ್.ವಿ.ಕುಮಾರ್, ಅಧ್ಯಕ್ಷ ಒಂಕಾರೇಗೌಡ, ರವೀಶ್ ಕುಮಾರ್, ಶಿಲ್ಪಿ ಏಕಾಂತರಾಮು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್, ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ವಿಶ್ವವಿದ್ಯಾಲಯ ಗೌರವಾಧ್ಯಕ್ಷ ಎಚ್.ಎಂ.ನಾರಾಯಣ್, ಕಲಾ ಸೇವಾ ಸಂಘ ಅಧ್ಯಕ್ಷ ಮೋಹನ್ ಗೌಡ್ರು, ಕನ್ನಡ ಸೇನೆ ಕರ್ನಾಟಕ ಅಧ್ಯಕ್ಷ ಪಿ.ಸಿ.ರಾಜೇಗೌಡ, ಟೌನ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಶ್ರೀನಿವಾಸ್, ಮುಖಂಡ ಜಾವಗಲ್ ಶ್ರೀಧರ್ ಮತ್ತಿತರರು ನುಡಿ ನಮನ ಸಲ್ಲಿಸಿದರು.