ಬೈಕ್ ಕಳ್ಳನ ಬಂಧನ: ಒಂದು ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನ ವಶ
ಮೈಸೂರು,ಜ.5: ಮೈಸೂರು ನಗರ ದೇವರಾಜ ಪೊಲೀಸರು ಟೌನ್ಹಾಲ್ ಬಳಿ ಕಾರ್ಯಾಚರಣೆ ನಡೆಸಿ, ಹೊಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ರಾಜೇಂದ್ರನಗರ, ಕೆಸರೆ 1ನೇ ಹಂತ ಕುರಿಮಂಡಿ ನಿವಾಸಿ ಶೇಖರ ಬಿನ್ ಚಂದ್ರ (28) ಎಂದು ಗುರುತಿಸಲಾಗಿದೆ. ಈತನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ, ಈತ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಸುಲಿಗೆ, 2 ದ್ವಿ ಚಕ್ರ ವಾಹನ ಕಳ್ಳತನ ಹಾಗೂ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಬಂಧಿತನಿಂದ 1 ಲಕ್ಷ ಮೌಲ್ಯದ 3 ದ್ವಿ ಚಕ್ರ ವಾಹನಗಳನ್ನು ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 250 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡ್ ಲಾಕನ್ನು ಮುರಿದು ವಾಹನಗಳನ್ನು ಕಳ್ಳತನ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ತಿಳಿಸಿದ್ದಾನೆ.
ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಂ ಅಮಟೆ ಮಾಗದರ್ಶನದಲ್ಲಿ, ದೇವರಾಜ ವಿಭಾಗದ ಎಸಿಪಿ ಜಿ.ಎಸ್ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ, ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಸನ್ನಕುಮಾರ್, ಪಿ.ಎಸ್.ಐ ಎಸ್ ರಾಜು ಮತ್ತು ಎಎಸ್ಐ ಉದಯಕುಮಾರ್, ಸಿಬ್ಬಂದಿಯವರಾದ ವೇಣುಗೋಪಾಲ, ಸೋಮಶೆಟ್ಟಿ, ಸುರೇಶ್, ಉಮೇಶ್, ನಂದೀಶ ಮತ್ತು ವಸಂತ ಮಾಡಿದ್ದಾರೆ.