ಸೋಮವಾರಪೇಟೆ: ಸ್ನೇಹಿತನ ಕೊಲೆಗೆ ಯತ್ನ; ದೂರು
ರಾಕೇಶ್ ಗೌಡ
ಸೋಮವಾರಪೇಟೆ, ಜ. 8: ಪ್ರವಾಸಕ್ಕೆಂದು ಕರೆದುಕೊಂಡು ಬಂದು, ಸ್ನೇಹಿತನ ಕೊಲೆಗೆ ಯತ್ನಿಸಿರುವ ಘಟನೆ ಇಲ್ಲಿಗೆ ಸಮೀಪದ ಕಿರಿಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳಗುಡಿ ಬೆಟ್ಟದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೂಲತಃ ಹಾಸನ ಜಿಲ್ಲೆಯ ರಾಯಪುರ ನಿವಾಸಿ ಕೆಲವು ವರ್ಷಗಳಿಂದ ಮೈಸೂರಿನ ಎಸ್ಬಿಐ ಯೂನಿಟ್ ಮ್ಯಾನೇಜರ್ ಆಗಿರುವ ರಾಕೇಶ್ ಗೌಡ(26) ಸ್ನೇಹಿತನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮಂಗಳವಾರ ಸಂಜೆ ಬೈಕ್ನಲ್ಲಿ ಬೆಟ್ಟಕ್ಕೆ ಆಗಮಿಸಿದ ಯುವಕರನ್ನು ಸ್ಥಳೀಯರು ಗಮನಿಸಿದ್ದಾರೆ. ಸ್ಥಳೀಯ ಬಾಬು ಎಂಬುವವರು ಕೆಲಸ ನಿಮ್ಮಿತ ಬೆಟ್ಟದ ಕಡೆಗೆ ತೆರಳಿದಾಗ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಗಮನಿಸಿ, ನಂತರ ಗಾಯಾಳುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಸೋಮವಾರಪೇಟೆ ಹಾಗು ಮಡಿಕೇರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ತನಿಖೆ ಕೈಗೊಂಡಿದ್ದಾರೆ.