ಶಿವಮೊಗ್ಗ: ಅಕ್ರಮ ಮರಳು ದಂಧೆ ಆರೋಪ; ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು
ಶಿವಮೊಗ್ಗ, ಜ. 10: ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ವಿರುದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳಲೂರು ಗ್ರಾಮದಿಂದ ಅಕ್ರಮ ಮರಳು ಸಾಗಾಣೆಗೆ ಅನುಕೂಲ ಮಾಡಿಕೊಡಲು ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ನಿವಾಸಿ ಫೈರೋಜ್ ಎಂಬುವರಿಂದ ಹೆಡ್ ಕಾನ್ಸ್ಟೇಬಲ್ ಯಲ್ಲಪ್ಪರವರು ನಗರದ ಹೋಟೆಲ್ವೊಂದರಲ್ಲಿ 17,500 ರೂ. ಲಂಚ ಪಡೆಯುವಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು.
ಈ ಸಂಬಂಧ ಯಲ್ಲಪ್ಪರನ್ನು ಬಂಧಿಸಿ, ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆಯ ವೇಳೆ ತಾವು ಸಂಗ್ರಹಿಸುತ್ತಿದ್ದ ಹಣ ಯಾರ್ಯಾರಿಗೆ ನೀಡಲಾಗುತ್ತಿತ್ತು ಎಂಬ ವಿಷಯವನ್ನು ಬಾಯ್ಬಿಟ್ಟಿದ್ದರು. ಇದರ ಆಧಾರದ ಮೇಲೆ ಎಸಿಬಿ ಪೊಲೀಸರು ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ಗಳ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.