ಹನೂರು: ಮನೆಗಳ ಕಾಮಗಾರಿ ಆದೇಶ ಪತ್ರ ವಿತರಣೆ
ಹನೂರು,ಜ.12: ತಾಲೂಕಿನ ಮೀಣ್ಯಂ ಗ್ರಾಮ ಪಂ. ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆಗಳ ಕಾಮಗಾರಿ ಆದೇಶ ಪತ್ರವನ್ನು ಶಾಸಕ ನರೇಂದ್ರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಮಿಣ್ಯಂ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಜನರು ಹೆಚ್ಚು ವಾಸಿಸುತ್ತಿದ್ದು, ಈ ಭಾಗದಲ್ಲಿ ಗ್ರಾಮಸ್ಥರ ಬೇಡಿಕೆಗೆ ಅನುಸರವಾಗಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ 224 ಹಾಗೂ ಅಂಗವಿಕರಿಗೆ 9 ಮನೆ ಒಟ್ಟು 233 ಮನೆಗಳ ಆದೇಶ ಪತ್ರವನ್ನು ಶನಿವಾರ ವಿತರಣೆ ಮಾಡಲಾಗುತ್ತಿದ್ದು, ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಹಾಗೆಯೇ ಮುಂದಿನ ದಿನಗಳಲ್ಲಿ ಗ್ರಾಮದ ಮುಖಂಡರು ನೇರವಾಗಿ ನನ್ನನ್ನು ಭೇಟಿ ಮಾಡಿ ಮನೆಗಳು ಅವಶ್ಯಕತೆ ಇರುವ ಗ್ರಾಮಸ್ಥರ ಹೆಸರುಗಳ ಪಟ್ಟಿ ನೀಡಿ ಎಂದರು.
ಮಧ್ಯವರ್ತಿಗಳು ಮೊರೆ ಹೋಗದಿರಿ: ಸರಕಾರದ ಸವಲತ್ತುಗಳನ್ನು ಗ್ರಾಮಸ್ಥರಿಗೆ ತಲುಪಿಸಲು ಸರಕಾರದಿಂದ ಯಾರನ್ನೂ ಸಹ ಮದ್ಯವರ್ತಿಗಳನ್ನಾಗಿ ನೇಮಿಸಿಲ್ಲ. ನಿಮ್ಮ ಸೇವೆ ಮಾಡಲು ಶಾಸಕನಾಗಿ ಸದಾ ನಿಮ್ಮ ಜೊತೆ ನಾನಿದ್ದೇನೆ. ಇತ್ತೀಚಿನ ದಿನಗಳಲ್ಲಿ ಹಲವು ಗ್ರಾಮ ಪಂ. ವ್ಯಾಪ್ತಿಯಲ್ಲಿ ಮದ್ಯವರ್ತಿಗಳು ಹಾವಳಿ ಹೆಚ್ಚಾಗಿದ್ದು, ಅಂತವರ ವಿರುದ್ಧ ಎಚ್ಚರದಿಂದ ಇರುವಂತೆ ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ನಟರಾಜು, ಪಾರ್ವತಿಬಾಯಿ, ದಿನ್ನಳ್ಳಿ ಗ್ರಾಪಂ ಸದಸ್ಯ ಮುರುಗೇಶ್, ಮುಖಂಡ ಬಾಲಾಜು ಪ್ರಕಾಶ್, ರಾಜಪ್ಪ ಕಾಳಿಯಪ್ಪ, ಕುಮಾರ್ ರಾಜು ಬಸವರಾಜು ಪ್ರಭುಸ್ವಾಮಿ ಸಿದ್ದುನಾಯಕ ಕೃಷ್ಣ, ಮುನಿಗೌಡ ಪಿಡಿಒ ಮಹದೇವ್ ಸೇರಿದಂತೆ ಹಲವರು ಹಾಜರಿದ್ದರು.