ಮೋದಿಗೆ ಕರ್ನಾಟಕವೆಂದರೆ ಭಯ: ಎಚ್.ಡಿ. ಕುಮಾರಸ್ವಾಮಿ
ಮೈಸೂರು,ಜ.14: ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ಅಂದರೆ ಭಯ. ಹಾಗಾಗಿ ಏನೇನೊ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಪೊಲೀಸ್ ಅಕಾಡೆಮಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಕ್ಲರ್ಕ್ ಅನ್ನೋ ಪದ ಎಲ್ಲಿ ಸೃಷ್ಟಿಯಾಗಿದೆ ಗೊತ್ತಿಲ್ಲ. ಮೋದಿ ಯಾಕೆ ಹೀಗೆ ಹೇಳಿದರೋ ನನಗೆ ಗೊತ್ತಿಲ್ಲ, ನಾವು ರಾಜ್ಯದಲ್ಲಿ ಸಮನ್ವಯತೆಯಿಂದ ಅಧಿಕಾರ ನಡೆಸುತಿದ್ದೇವೆ. ಪ್ರಧಾನಿ ಮೋದಿಗೆ ಕರ್ನಾಟಕ ಅಂದರೆ ಭಯ ಕಾಡುತ್ತಿದೆ. ಮುಂದಿನ ಚುನಾವಣೆಯಲ್ಲಿನ ರಾಜಕೀಯ ಅಸ್ಥಿರತೆ ಕಂಡು ಭಯ ಶುರುವಾಗಿದೆ ಎಂದು ಕಿಡಿಕಾರಿದರು.
ಪೊಲೀಸ್ ಇಲಾಖೆಯ ಔರಾದ್ಕರ್ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಔರಾದ್ಕರ್ ವರದಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಶುಭಾಶಯ ಕೋರಿದ ಸಿಎಂ: ರಾಜ್ಯದ ಜನತೆಗೆ ಮತ್ತು ವಿಶೇಷವಾಗಿ ರೈತ ಬಂಧುಗಳಿಗೆ ಸಂಕ್ರಾಂತಿ ಶುಭಾಶಯಗಳು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಯಿ ಶ್ರೀಚಾಮುಂಡೇಶ್ವರಿ ದೇವರ ಆಶೀರ್ವಾದಿಂದ ರೈತ ಬಂಧಿಗಳು ನೆಮ್ಮದಿಯಾಗಿ ಜೀವನ ನಡೆಸಲಿ ಎಂದರಲ್ಲದೆ ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯ ಕೋರಿದರು.