ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ 60 ಕೋಟಿ ರೂ.ಆಮಿಷ: ಶಾಸಕ ಶಿವಲಿಂಗೇಗೌಡ ಆರೋಪ
"ಕರೆ ಮಾಡಿ ಆಫರ್ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್"
ಬೆಂಗಳೂರು, ಜ. 16: ಜೆಡಿಎಸ್ ಶಾಸಕರಿಗೆ ಬಿಜೆಪಿ ಮುಖಂಡರು 60 ಕೋಟಿ ರೂ. ಹಾಗೂ ಸಚಿವ ಸ್ಥಾನದ ಆಮಿಷವೊಡ್ಡುತ್ತಿದ್ದು, 500 ಕೋಟಿ ರೂ. ನೀಡಿದರೂ ಜೆಡಿಎಸ್ ಪಕ್ಷ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದ್ದು, ಬಿಜೆಪಿಯವರು ದುಡ್ಡಿನ ಸುರಿಮಳೆಗೈಯುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರೆ ಖುದ್ದು ಕರೆ ಮಾಡಿ ಆಮಿಷವೊಡ್ಡುತ್ತಿದ್ದಾರೆ ಎಂದು ದೂರಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಅವರಿಗೆ ಬಿಜೆಪಿ 60 ಕೋಟಿ ರೂ. ಆಮಿಷವೊಡ್ಡಿದ್ದು, ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಬಿಜೆಪಿ ಮುಖಂಡರು ಯಾವುದೇ ನಾಚಿಕೆ ಇಲ್ಲದೇ ಈ ರೀತಿಯ ದಂಧೆಗೆ ಇಳಿದಿದ್ದು, ಜೆಡಿಎಸ್ನ ಯಾವ ಶಾಸಕರೂ ಪಕ್ಷ ತ್ಯಜಿಸುವುದಿಲ್ಲ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಯಾವುದೇ ಅಭದ್ರತೆ ಇಲ್ಲ. ಸಿಎಂ ಕುಮಾರಸ್ವಾಮಿ ನೇತೃತ್ವದ ಸರಕಾರ ಕುಸಿಯುವುದಿಲ್ಲ. ಆದರೆ, ಬಿಜೆಪಿ ಆಪರೇಷನ್ ಕಮಲ ಠುಸ್ ಆಗಿದೆ ಎಂದು ಶಿವಲಿಂಗೇಗೌಡ ಇದೇ ವೇಳೆ ವಾಗ್ದಾಳಿ ನಡೆಸಿದರು.