ಒಬ್ಬೊಬ್ಬರಾಗಿ ಬೆಂಗಳೂರಿಗೆ ಮರಳುತ್ತಿರುವ ಬಿಜೆಪಿ ಶಾಸಕರು
ಬೆಂಗಳೂರು, ಜ. 17: ನಾಲ್ಕೈದು ದಿನಗಳಿಂದ ಹರಿಯಾಣದ ಐಷಾರಾಮಿ ಹೊಟೇಲ್ನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಬೆಂಗಳೂರಿಗೆ ವಾಪಸ್ ಮರಳುತ್ತಿದ್ದಾರೆ.
‘ಆಪರೇಷನ್ ಕಮಲ’ದ ಮೂಲಕ ಅಧಿಕಾರಕ್ಕೇರುವ ತಂತ್ರ ರೂಪಿಸಿದ್ದ ಬಿಜೆಪಿ, ತಮ್ಮ ಪಕ್ಷದ ಶಾಸಕರನ್ನು ಹರಿಯಾಣದ ರೆಸಾರ್ಟ್ನಲ್ಲಿ ಹಿಡಿದಿಟ್ಟುಕೊಳ್ಳಲಾಗಿತ್ತು. ಆದರೆ, ಆಪರೇಷನ್ಗೆ ಅತೃಪ್ತ ಶಾಸಕರು ಕೈಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.
ಗುರುವಾರ ಬೆಳಗ್ಗೆ ಯಡಿಯೂರಪ್ಪ, ವಿ.ಸೋಮಣ್ಣ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಿಂದಿರುಗಿದ ಬೆನ್ನಲ್ಲೆ ಬೀಳಗಿ ಕ್ಷೇತ್ರದ ಶಾಸಕ ಮುರಗೇಶ್ ನಿರಾಣಿ, ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಇಲ್ಲಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಬಿಜೆಪಿ 104ಮಂದಿ ಶಾಸಕರ ಪೈಕಿ 100ಕ್ಕೂ ಹೆಚ್ಚು ಮಂದಿಗೆ ರೆಸಾರ್ಟ್ನಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ 15ಕ್ಕೂ ಹೆಚ್ಚು ಮಂದಿ ಬಿಜೆಪಿ ಶಾಸಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಉಳಿದೆಲ್ಲ ಶಾಸಕರು ಹರಿಯಾಣದಲ್ಲೆ ಉಳಿದಿದ್ದು, ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದೆ.