ಪಾರ್ಕಿನ್ಸನ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ದಂಪತಿಯಿಂದ ಕಠ್ಮಂಡು ಪ್ರಯಾಣ
ಬೆಂಗಳೂರು, ಜ.17: ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯ ಸಹಕಾರದೊಂದಿಗೆ ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜ.18 ರಿಂದ 40 ದಿನಗಳ ಕಾಲ ಹರಿಪ್ರಸಾದ್ ದಂಪತಿ ಬೆಂಗಳೂರಿನಿಂದ ಕಠ್ಮಂಡುವಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಹರಿಪ್ರಸಾದ್ ಮಾತನಾಡಿ ಸುಮಾರು 10 ವರ್ಷಗಳ ಹಿಂದೆ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದೆ. ಮೊದಲಿಗೆ ಎಡಗೈಯಲ್ಲಿ ನಡುಕ ಉಂಟಾಗಿ ದೇಹದ ಎಡಭಾಗದ ಚಲನೆಯಲ್ಲಿ ನಿಧಾನಗತಿ ಕಂಡುಬಂದಿತು. ದೈನಂದಿನ ಚಟುವಟಿಕೆಗಳಿಗೂ ಸಹ ಇತರರ ಸಹಾಯ ಬೇಕಿತ್ತು. ಈ ತರಹದ ಸ್ಥಿತಿಯಲ್ಲಿ ಇದ್ದಾಗ ಕೊಲಂಬಿಯಾ ಏಷಿಯಾ ಆಸ್ಪತ್ರೆ ನನಗೆ ಉತ್ತಮ ಚಿಕಿತ್ಸೆ ನೀಡಿತು. ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸುಮಾರು 2,600 ಕಿ.ಮೀ ಪ್ರಯಾಣ ಬೆಳೆಸಲಿದ್ದೇವೆ ಎಂದು ತಿಳಿಸಿದರು.
ಕೊಲಂಬಿಯಾ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸೆಯ ಹಿರಿಯ ಸಲಹೆಗಾರ ಡಾ.ರಘುರಾಮ್ ಮಾತನಾಡಿ, ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಶಸ್ತ್ರ ಚಿಕಿತ್ಸೆಯ ನಂತರ ಪಾರ್ಕಿನ್ಸನ್ ರೋಗಲಕ್ಷಣಗಳಾದ ನಡುಕ, ನಿಧಾನಗತಿ ಮತ್ತು ಬಿಗಿತ ಒಳಗೊಂಡ ಲಕ್ಷಣಗಳು ಕಡಿಮೆಯಾದವು ಎಂದು ಮಾಹಿತಿ ನೀಡಿದರು.