ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಂಗ್ಲೀಷ್ ಶಾಲೆ ಆರಂಭ: ಸಚಿವ ಹೆಚ್.ಡಿ.ರೇವಣ್ಣ
ಹಾಸನ,ಜ.18: 2019ರ ಶೈಕ್ಷಣಿಕ ವರ್ಷದಲ್ಲಿ ಇಂಗ್ಲೀಷ್ ಶಾಲೆ ಆರಂಭಗೊಳ್ಳಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2019 ರಿಂದ ರಾಜ್ಯದ 1 ಸಾವಿರ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಬೇಕು. ಈ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಬರೀ ರೇವಣ್ಣ, ಕುಮಾರಣ್ಣನ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದಲ್ಲ. ಕೂಲಿ ಕಾರ್ಮಿಕರ ಮಕ್ಕಳ, ಬಡ ಕುಟುಂಬಕ್ಕೆ ಸೇರಿದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಅವಕಾಶ ಮಾಡಿಕೊಡಬೇಕು. ಹಾಗಾಗಿ ಇಂಗ್ಲಿಷ್ ಶಾಲೆಗಳಿಗೆ ನನ್ನ ಬೆಂಬಲ ಇದೆ ಎಂದರು.
ಇಂಗ್ಲೀಷ್ ಶಾಲೆ ಮುಚ್ಚಿಸಲಿ ಎಂಬ ಸಾಹಿತಿಗಳ ಮನವಿಗೆ ಉತ್ತರಿಸಿದ ರೇವಣ್ಣ, ಬಡವರು, ಕೂಲಿಕಾರ್ಮಿಕರ ಮಕ್ಕಳು ಎಲ್ಲಿ ಹೋಗಬೇಕು ಎಂದು ಪ್ರಶ್ನೆ ಮಾಡಿದರು. ಇಂಗ್ಲಿಷ್ ಬೇಡ ಅನ್ನುವುದಾದರೆ ಕನ್ನಡ ಶಾಲೆ ಮಾತ್ರ ಇರಲಿ. ಇಂಗ್ಲೀಷ್ ಶಾಲೆ ಮುಚ್ಚಿಸಿ ಎಂದು ಆಗ್ರಹಿಸಿದರು.
ಸಿದ್ಧಗಂಗಾ ಶ್ರೀಗಳು ಭೂಮಿ ಮೇಲಿರುವ ದೇವರು. ಅವರಿಗೆ ಭಾರತ ರತ್ನ ಅರ್ಪಣೆ ಮಾಡುವ ವಿಚಾರದಲ್ಲಿ ಮರುಪ್ರಶ್ನೆಯೇ ಇಲ್ಲ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆನ್ನುವುದೇ ನನ್ನ ಆಗ್ರಹ. ಇದಕ್ಕೆ ರಾಜ್ಯ ಸರಕಾರದ ಯಾವುದೇ ವಿರೋಧವಿಲ್ಲ ಎಂದರು.