ಕಾಫಿ ಸೇವಿಸಿ ಇಬ್ಬರು ಮೃತ್ಯು, ಮತ್ತಿಬ್ಬರು ತೀವ್ರ ಅಸ್ವಸ್ಥ: ವಿಷ ಬೆರೆತಿರುವ ಶಂಕೆ
ಬಾಗೇಪಲ್ಲಿ,ಜ.18: ಕಾಫಿ ಸೇವಿಸಿದ ನಂತರ ತೀವ್ರ ಅಸ್ವಸ್ಥರಾಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಚೇಳೂರು ಹೋಬಳಿಯ ಬತ್ತಲವರಪಲ್ಲಿ ಗ್ರಾಮದಲ್ಲಿ ನಡೆದಿದೆ.
ಚೇಳೂರು ಹೋಬಳಿಯ ಬತ್ತಲವರಪಲ್ಲಿ ಗ್ರಾಮದ ಅಕ್ಕಲಮ್ಮ(80) ಎಂಬವರ ತೋಟದ ಮನೆಯಲ್ಲಿ ಬೆಳಗ್ಗೆ ಅಕ್ಕಲಮ್ಮನ ಮಗಳಾದ ನರಸಮ್ಮ(55) ಮತ್ತು ಮೊಮ್ಮಕ್ಕಳಾದ ಆರತಿ(4) ಅರವಿಂದ(5) ಕಾಫಿ ಸೇವಿಸಿದ್ದಾರೆ. ತಕ್ಷಣ 4 ಜನ ವಾಂತಿ ಮಾಡಿಕೊಂಡು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಕೂಡಲೇ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಅಕ್ಕಲಮ್ಮ ಮತ್ತು ನರಸಮ್ಮ ಎಂಬವರನ್ನು ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನರಸಮ್ಮ ನವರ ಮೊಮ್ಮಕ್ಕಳಾದ ಆರತಿ ಮತ್ತು ಅರವಿಂದ್ ರವರು ಕೋಲಾರದ ದೇವರಾಜ ಅರಸು ಮೆಡಿಕಲ್ ಕಾಲೇಜಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಟಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ಪಿಎಸ್ಐ ಚಂದ್ರಕಲಾ ಅವರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಕಾಫಿಯಲ್ಲಿ ವಿಷ ಬೆರೆತಿರುವ ಶಂಕೆ ವ್ಯಕ್ತವಾಗಿದೆ.