ದಾವಣಗೆರೆ: ಅರಣ್ಯ ಭೂಮಿ ಹಕ್ಕುಪತ್ರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಧರಣಿ
ದಾವಣಗೆರೆ,ಜ.21: ಅರಣ್ಯಭೂಮಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಆಲೂರು, ಗುಡಾಳು, ಮ್ಯಾಸರಹಳ್ಳಿ, ಗುಮ್ಮನೂರು, ನೀರ್ಥಡಿ, ಹುಚ್ಚವ್ವನಹಳ್ಳಿ, ಬಾವಿಹಾಳ, ಕಾಡಜ್ಜಿ, ದಿಂಡದಹಳ್ಳಿ, ಹೆದ್ನೆ, ರಾಂಪುರ ಮತ್ತಿತರೆ ಗ್ರಾಮಗಳಲ್ಲಿ ಸರ್ಕಾರದ ಜಮೀನು ಅರಣ್ಯ ಇಲಾಖೆಯದ್ದೆಂದು ಪಹಣಿಯಲ್ಲಿ ಬರುತ್ತಿದೆ. ಆದರೆ ಅರಣ್ಯ ಹಕ್ಕುಕಾಯ್ದೆ ಅಡಿಯಲ್ಲಿ ಅರ್ಜಿ ವಿಲೇವಾರಿ ಮಾಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಗ್ರಾಮಗಳ ಜಮೀನು ಅರಣ್ಯ ಇಲಾಖೆಗೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ ಹಾಗೂ ಹರಿಹರ ತಾಲೂಕಿನ ಕೊಕ್ಕನೂರು, ಜಿ.ಟಿ.ಕಟ್ಟೆ ಗ್ರಾಮದಲ್ಲಿ ಸಾಗುವಳಿ ಮಾಡಿರುವ ಜಮೀನು ಸಹ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ. ಜಿಲ್ಲೆಯ ಕಂದಾಯ ಇಲಾಖೆಯ ಜಮೀನು 2000 ಅಥವಾ 2004 ರ ಇಸವಿಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಅತಿಕ್ರಮಣದಾರರ ಅರ್ಜಿ ಪರಿಶೀಲನೆ ಮಾಡುವಾಗ ಯಾವ ವರ್ಷದ ದಾಖಲೆ ಆಧಾರದ ಮೇಲೆ ಭೂಮಿ ಮಂಜೂರು ಮಾಡುತ್ತಿದೆ ಎಂಬುದನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಬ್ಯಾಂಕ್ ಗಳು ಗ್ರಾಮೀಣ ಭಾಗದ ರೈತರಿಗೆ ಟ್ರ್ಯಾಕ್ಟರ್ ಸಾಲ ಹೆಚ್ಚಾಗಿ ನೀಡುತ್ತಿದೆ. ಆದರೆ ವಸೂಲಾತಿಯಲ್ಲಿ ಮಾತ್ರ ಬಲವಂತವಾಗಿ ಅತಿಹೆಚ್ಚಿನ ಬಡ್ಡಿ ಮತ್ತು ವಿಪರೀತ ದಂಡ ವಿಧಿಸುತ್ತಿದ್ದಾರೆ. ಇದು ಖಂಡನೀಯ. ಈ ರೀತಿ ರೈತರನ್ನು ಶೋಷಿಸುವ ಬ್ಯಾಂಕ್ ಗಳ ಮೇಲೆ ಸರ್ಕಾರ ಕ್ರಮಕೈಗೊಂಡು ರೈತರ ಪ್ರಾಣ ಮತ್ತು ಆಸ್ತಿಯನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಹುಚ್ಚವ್ವನಹಳ್ಳಿ ಮಂಜುನಾಥ್, ಅರಸನಾಳು ಸಿದ್ದಪ್ಪ, ಗೌಡ್ರಶೇಖರಪ್ಪ, ಬಸವರಾಜ್, ಚಿರಂಜೀವಿ ಪರಮೇಶ್, ರವಿಕುಮಾರು ಮತ್ತಿತರರಿದ್ದರು.