ಸಿದ್ಧಗಂಗಾ ಶ್ರೀಗಳಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ
ಫೈಲ್ ಚಿತ್ರ
ಬೆಂಗಳೂರು/ವಾರಣಾಸಿ, ಜ.21: ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ, ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಂಗಳವಾರ ಉತ್ತರಪ್ರದೇಶದ ವಾರಣಾಸಿಯಲ್ಲಿ ಆಯೋಜಿಸಲಾಗಿರುವ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ತಮ್ಮ ಭಾಷಣ ಆರಂಭಕ್ಕೂ ಮುನ್ನ ಶ್ರೀಗಳನ್ನು ಸ್ಮರಿಸಿ, ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನನಗೆ ಅನೇಕ ಬಾರಿ ಡಾ.ಶಿವಕುಮಾರ ಸ್ವಾಮೀಜಿಯನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿತ್ತು. ಪ್ರತಿ ಬಾರಿ ನಾನು ಮಠಕ್ಕೆ ಭೇಟಿ ನೀಡಿದಾಗ, ಅವರು ನನ್ನನ್ನು ಒಬ್ಬ ಮಗನಂತೆ ಸ್ನೇಹದಿಂದ ಕಂಡು ಆಶೀರ್ವಾದ ಮಾಡುತ್ತಿದ್ದರು ಎಂದು ಮೋದಿ ಹೇಳಿದರು.
ಅಂತಹ ಮಹಾ ಋಷಿಯ ಅಗಲಿಕೆ ನಮ್ಮೆಲ್ಲರಿಗೂ ದುಃಖದ ವಿಷಯ. ಮಾನವ ಕಲ್ಯಾಣಕ್ಕಾಗಿ ಶಿವಕುಮಾರ ಸ್ವಾಮೀಜಿ ಮಾಡಿದ ಸೇವೆಯನ್ನು ದೇಶ ಸದಾ ನೆನಪಿನಲ್ಲಿಡುತ್ತದೆ. ಅವರಿಗೆ ನನ್ನ ಆದರಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಮೋದಿ ತಿಳಿಸಿದರು.