ತುಳುಕೂಟದ ದಶಮಾನೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
ಮೂಡಿಗೆರೆ, ಜ.22: ಸಂಘ ಸಂಸ್ಥೆಗಳು ಸಭಾ ಕಾರ್ಯಕ್ರಮ ನಡೆಸುವ ಬದಲು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಹೇಳಿದರು.
ಅವರು ಸೋಮವಾರ ಮೂಡಿಗೆರೆ ತುಳುಕೂಟದ ದಶಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ತಮ್ಮ ನಿವಾಸದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಸಭಾ ಕಾರ್ಯಕ್ರಮದ ಉಪದೇಶ ನೀಡುವ ಭಾಷಣ ಕೇಳಲು ಜನರು ತಯಾರಿರುವುದಿಲ್ಲ. ಸಭಾ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳು ಆದಷ್ಟು ಕಡಿಮೆ ಮಾಡಿ ಜನರಿಗೆ ಒಳ್ಳೆಯ ಸಂದೇಶ ಸಾರುವ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರೆ ಅಂತಹ ಸಂಸ್ಥೆಯನ್ನು ಜನ ಮೆಚ್ಚುತ್ತಾರೆ ಎಂದು ತಿಳಿಸಿದರು.
ಮೂಡಿಗೆರೆ ತುಳುಕೂಟ ಕಳೆದ 10ವರ್ಷದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯುತ್ತಿದೆ. ಆನರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಿದೆ. ವಿವಿಧ ರೀತಿಯ ತುಳು ಕಾರ್ಯಕ್ರಮ ಹಮ್ಮಿಕೊಂಡು ಮಲೆನಾಡಿನಲ್ಲೂ ತುಳು ಭಾಷೆಯ ಕಂಪನ್ನು ಗಟ್ಟಿಗೊಳಿಸುತ್ತಿರುವುದು ಹಾಗೂ ಈಗ 10ನೇ ವರ್ಷದ ದಶಮಾನೋತ್ಸವ ನಡೆಸುವ ಮೂಲಕ ಜಿಲ್ಲಾ ಮಟ್ಟದಲ್ಲಿ 2 ದಿನ ಆಯೋಜಿಸಿರುವ ತುಳು ಸಮ್ಮೇಳನಕ್ಕೆ ಶುಭ ಹಾರೈಸಿದರು.
ಈ ವೇಳೆ ತುಳುಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ, ಮುಖಂಡರಾದ ನರೇಂದ್ರ ಶೆಟ್ಟಿ, ಕಿರುಗುಂದ ಅಬ್ಬಾಸ್, ರವಿಕುಮಾರ್, ಫಿಶ್ ಮೋಣು, ರಮೇಶ್ ಆಚಾರಿ, ಅತುಲ್ರಾವ್ ಉಪಸ್ಥಿತರಿದ್ದರು.