ಕಾಂಗ್ರೆಸಿಗರಲ್ಲಿ ಮೊದಲು ಇದ್ದ ದೊಡ್ಡತನ ಈಗ ಕಾಣಿಸುತ್ತಿಲ್ಲ: ಸಚಿವ ಪುಟ್ಟರಾಜು
"ನಮ್ಮ ರಕ್ತದ ಕಣ ಕಣದಲ್ಲೂ ಕುಮಾರಸ್ವಾಮಿಯೇ ಮುಖ್ಯಮಂತ್ರಿ"
ಬೆಂಗಳೂರು, ಜ. 28: ‘ಕಾಂಗ್ರೆಸ್ ಪಕ್ಷದವರ ವರ್ತನೆ ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ಪರಿಣಾಮ ಬೇರೆ ರೀತಿಯಲ್ಲಿಯೇ ಇರುತ್ತದೆ’ ಎಂದು ಸಚಿವ ಸಿ.ಎಸ್.ಪುಟ್ಟರಾಜು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವೇನು ಅಧಿಕಾರಕ್ಕಾಗಿ ಯಾರ ಮನೆ ಬಳಿಯೂ ಅರ್ಜಿ ಹಿಡಿದುಕೊಂಡು ಹೋಗಿಲ್ಲ. ನೀವೇ ಮುಖ್ಯಮಂತ್ರಿ ಆಗಿ ಎಂದು ಬೇಷರತ್ ಬೆಂಬಲ ನೀಡಿದ್ದರಿಂದ ಹೊಣೆ ಹೊತ್ತು ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊದಲಿಗೆ ಕಾಂಗ್ರೆಸಿಗರು ದೊಡ್ಡತನದ ಮಾತುಗಳನ್ನು ಆಡಿದ್ದರು. ಇದೀಗ ಅವರಲ್ಲಿ ದೊಡ್ಡತನ ಕಾಣಿಸುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿಗೆ ‘ಹಗ್ಗ’ ಹಾಕಿ ಹೀಗೆ ನಡೆಯಬೇಕೆಂದು ದಾರಿ ತೋರಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವಧಿಯ ಯೋಜನೆಗಳನ್ನು ಮೈತ್ರಿ ಸರಕಾರ ಮುಂದುವರೆಸಿದೆ. ರಾಜೀನಾಮೆ ನೀಡಲು ಸಿದ್ಧ ಎಂದು ಕುಮಾರಸ್ವಾಮಿ ಹೇಳಬೇಕಾದರೆ ಅವರಿಗೆ ಎಷ್ಟು ನೋವಿದೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಹೆಜ್ಜೆ-ಹೆಜ್ಜೆಗೂ ತಕರಾರು ಸಲ್ಲ. ನಮ್ಮ ರಕ್ತದ ಕಣ ಕಣದಲ್ಲೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಮ್ಮ ನಾಯಕ. ಬಿಜೆಪಿ ಜೊತೆಗಿನ 20 ತಿಂಗಳ ಅಧಿಕಾರ ಜನ ಮೆಚ್ಚುವಂತಿತ್ತು ಎಂದು ಪುಟ್ಟರಾಜು, ಬಿಜೆಪಿ ಬೆಂಬಲಕ್ಕೆ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.