ವಿಜಯಪುರ: ಈರುಳ್ಳಿ ಬೆಲೆ ಕುಸಿತಕ್ಕೆ ರೈತರು ಕಂಗಾಲು
ವಿಜಯಪುರ, ಫೆ. 5: ಈರುಳ್ಳಿ ಬೆಲೆ ಕುಸಿತಕ್ಕೆ ವಿಜಯಪುರ ರೈತರು ಕಂಗಾಲಾಗಿದ್ದು, ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಲ್ಲಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಈರುಳ್ಳಿ ದರ ಸಿಕ್ಕಾಪಟ್ಟೆ ಏರಿಕೆ ಕಂಡು ಗ್ರಾಹಕನ ಕಣ್ಣಲ್ಲಿ ನೀರು ತರಿಸ್ತಾ ಇತ್ತು. ಆದರೆ ಈರುಳ್ಳಿ ದರ ಎರಡು ದಶಕಗಳ ಹಿಂದೆ ಇದ್ದ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ರಾಜ್ಯದ ಎಪಿಎಂಸಿ ಯಾರ್ಡ್ಗಳಲ್ಲಿ ಒಂದು ಕೆಜಿ ಈರುಳ್ಳಿ ದರ 1 ರಿಂದ 5 ರೂ. ಸೀಮಿತವಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಕ್ವಿಂಟಾಲ್ ಈರುಳ್ಳಿಗೆ 3 ರಿಂದ 5 ಸಾವಿರ ರೂ. ಇತ್ತು. ಆದರೆ, ಈ ವರ್ಷ 250 ರಿಂದ 300 ರೂ.ಗೆ ಕುಸಿತ ಕಂಡಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ 15 ರೂ.ಗಿಂತ ಕಡಿಮೆಗೆ ಸಿಗುತ್ತಿಲ್ಲ. ಬೆಳೆದ ರೈತನಿಗೆ ಕೆ.ಜಿಗೆ 3-4 ರೂ., ಖರೀದಿಸುವವರಿಗೆ ಕೆ.ಜಿಗೆ 15 ರೂ. ಇದರ ನಡುವಿನ ಭಾರಿ ವ್ಯತ್ಯಾಸದ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿರುವ ದೋಷಗಳಿಗೆ ಸಾಕ್ಷಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ಈರುಳ್ಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.