ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಸುಭದ್ರ: ಸಚಿವ ಸಿ.ಎಸ್.ಪುಟ್ಟರಾಜು
ಪಾಂಡವಪುರ,ಫೆ.6: ರಾಜ್ಯದಲ್ಲಿ ಬಿಜೆಪಿ ಡೊಂಬರಾಟ ಏನೂ ನಡೆಯದು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಬಜೆಟ್ ಅಧಿವೇಶನ ಸಭೆಗೆ ಗೈರಾಗಿರುವ ಅತೃಪ್ತ ಶಾಸಕರು ಬಿಜೆಪಿ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಪಕ್ಷದಿಂದ ಎಲ್ಲಾ ಶಾಸಕರಿಗೂ ವಿಫ್ ಜಾರಿಗೊಳಿಸಲಾಗಿದೆ ಎಂದರು.
ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರು ಬಾವಿಗಿಳಿದು ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗದು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವುದು ನೂರಕ್ಕೆ ನೂರರಷ್ಟು ನಿಶ್ಚಿತವಾಗಿದ್ದು, ಬಿಜೆಪಿ ಆಟ ಏನೂ ನಡೆಯದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರಮೋದಿ ನೇಮಕ ಮಾಡಿರುವ ರಾಜ್ಯಪಾಲರು ಬಜೆಟ್ ಪೂರ್ವ ಭಾಷಣ ಮಾಡಿದ್ದು, ಸರ್ಕಾರ ಪರ ಉತ್ತಮವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗದು. ಅಲ್ಲದೇ ನಾವು ಬಜೆಟ್ ಮಂಡಿಸಲಿದ್ದೇವೆ. ಜತೆಗೆ ಉತ್ತಮ ಜನಪರ ಬಜೆಟ್ ಮಂಡಿಸುತ್ತೇವೆ ಎಂದರು.