5 ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್
ದಾವಣಗೆರೆ,ಫೆ.9: ಸಮ್ಮಿಶ್ರ ಸರ್ಕಾರ 5 ವರ್ಷ ಏನೂ ಆಗುವುದಿಲ್ಲ. ಸರ್ಕಾರವಂತೂ ಸುಭದ್ರ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಹರಿಹರ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.6 ಕ್ಕೆ ಸರ್ಕಾರ ಬೀಳುತ್ತೆ, ಫೆ.7ಕ್ಕೆ ಸರ್ಕಾರ ಬಿದ್ದೇ ಬೀಳುತ್ತದೆ, ಫೆ.8ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಅಂದು ಕುಮಾರಸ್ವಾಮಿ ಯಶಸ್ವಿಯಾಗಿ ಮೈತ್ರಿ ಸರ್ಕಾರದ 2ನೇ ಬಜೆಟ್ ಮಂಡಿಸಿದ್ದಾರೆ. ಸೋಮವಾರ ಬಜೆಟ್ ಮೇಲೆ ಚರ್ಚೆಯಾಗಲಿದ್ದು, ಅನುಮೋದನೆಯೂ ಸಿಗಲಿದೆ ಎಂದು ವಿಶ್ವನಾಥ್ ತಿಳಿಸಿದರು.
ಜೆಡಿಎಸ್ ಪಕ್ಷದ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಮುಂಬೈ ಮೂಲದವರಾಗಿದ್ದು, ವ್ಯವಹಾರವೂ ಅಲ್ಲೇ ಇದೆ. ಅನಾರೋಗ್ಯದ ಕಾರಣಕ್ಕೆ ಹೋಗಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರ್ಕಾರದ 2ನೇ ಬಜೆಟ್ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವೆಂಬ ಕೆಲ ಅಂಶಗಳು ನಿಜ. ಕೆಲವೇ ಜಿಲ್ಲೆಗಳಿಗೆ ಕೆಲವಾರು ಯೋಜನೆಗಳನ್ನು ಕೊಟ್ಟಿರುವುದೂ ಸತ್ಯ ಎಂದು ಅವರು ಹೇಳಿದರು.