ಪಾಕಿಸ್ತಾನದ ಕೃತ್ಯ ಸಹಿಸಲು ಸಾಧ್ಯವಿಲ್ಲ: ಯಡಿಯೂರಪ್ಪ
ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ
ಮಂಡ್ಯ,ಫೆ,15: ಪಾಕಿಸ್ತಾನದವರದ್ದು ನೀಚ ಕೃತ್ಯ. ದೇಶದ ಇತಿಹಾಸದಲ್ಲಿ ಇಂತಹ ದೊಡ್ಡ ಪ್ರಮಾಣದ ದಾಳಿ ಆಗಿರಲಿಲ್ಲ. ಪಾಕಿಸ್ತಾನದ ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಅದಕ್ಕೆ ತಕ್ಕ ಪಾಠ ಕೊಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ಗುಡಿಗೆರೆ ಕಾಲನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಭೇಟಿ ನೀಡಿ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಹುತಾತ್ಮ ಯೋಧ ಗುರು ಕುಟುಂಬಕ್ಕೆ ಬಿಜೆಪಿ ವತಿಯಿಂದ 1ಲಕ್ಷ ರೂ. ಪರಿಹಾರ ನೀಡಲಾಯಿತು.
ಈ ವೇಳೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ಸಿಗರ ಹೇಳಿಕೆ ಮೂರ್ಖತನದ್ದು. ಬಹಳ ಬಾರಿ ಇಂತಹ ಘಟನೆಗಳು ನಡೆದಿದೆ. ಆದರೆ, ವಾಹನದಲ್ಲಿ ಹೋಗುವಾಗ ಇಂತಹ ಘಟನೆ ನಡೆದಿರುವುದು ಖಂಡನೀಯ. ಪಾಕಿಸ್ತಾನದ ಹುಟ್ಟು ಅಡಗಿಸಬೇಕು. ದೇಶ ಒಟ್ಟಾಗಿ ಇದನ್ನು ಎದುರಿಸಬೇಕು. ಈ ವಿಚಾರದಲ್ಲಿ ಯಾರು ಕೂಡ ಬೇಜವಾಬ್ದಾರಿ ಉತ್ತರ ನೀಡಬಾರದು ಎಂದರು.
ಆರ್.ಅಶೋಕ್ ಮಾತನಾಡಿ, ಪಾಕಿಸ್ತಾನದ ಭಯೋತ್ಪಾದಕರ ಸಂಘಟನೆಯನ್ನು ನಿರ್ಣಾಮ ಮಾಡುತ್ತೇವೆ. ನಾವು ಕೂಡ ಬುಲೆಟ್ನಿಂದ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಗುಪ್ತಚರ ಇಲಾಖೆ ವೈಫಲ್ಯ ಕಾರಣ: ಎಲ್.ಆರ್.ಶಿವರಾಮೇಗೌಡ
ಯೋಧರ ಸಾವಿಗೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯ ಕಾರಣ. ಸರ್ಜಿಕಲ್ ಸ್ಟ್ರೈಕ್ ಮಾಡಿ ಮೋದಿ ಏನ್ ಮಾಡಿದರು ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಪ್ರಶ್ನಿಸಿದ್ದಾರೆ.
ಮೃತ ಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕೇಂದ್ರದ ಗುಪ್ತಚರ ಇಲಾಖೆ ವೈಫಲ್ಯದಿಂದ ಇದೆಲ್ಲ ನಡೆದಿದೆ. ಮೃತ ಯೋಧರ ಸಾವಿಗೆ ನ್ಯಾಯ ಕೊಡಿಸಲು ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ದರ್ಶನ್ ಪುಟ್ಟಣ್ಣಯ್ಯ ಸಾಂತ್ವನ
ರೈತ ಮುಖಂಡ, ದಿ.ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹುತಾತ್ಮ ಯೋಧನ ಕುಟುಂದವರಿಗೆ ಸಾಂತ್ವನ ಹೇಳಿದರು.