ಪುಲ್ವಾಮಾ ಭಯೋತ್ಪಾದನಾ ಕೃತ್ಯಕ್ಕೆ ಪ್ರತೀಕಾರ ಕ್ರಮವಾಗಲಿ: ಮುಸ್ಲಿಂ ಮುತ್ತಹಿದಾ ಕೌನ್ಸಿಲ್ ಆಗ್ರಹ
ವಿಜಯಪುರ, ಫೆ.16: ಜಮ್ಮು - ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಯೋಧರ ಮೇಲಿನ ಆತ್ಮಾಹುತಿ ದಾಳಿ ಒಂದು ಹೇಡಿತನದ ಕೃತ್ಯವಾಗಿದೆ ಎಂದು ಮುಸ್ಲಿಂ ಮುತ್ತಹಿದಾ ಕೌನ್ಸಿಲ್ ಅಧ್ಯಕ್ಷ ಸೈಯದ್ ಮುಹಮ್ಮದ್ ತನ್ವೀರ್ ಪಿರಾ ಹಾಶ್ಮಿ ಖಂಡಿಸಿದ್ದಾರೆ.
ಇಂದು ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದಾಳಿ ಕೇವಲ ಯೋಧರ ಮೇಲೆ ನಡೆದಿರುವ ದಾಳಿಯಲ್ಲ, ಇದು ದೇಶದ ಮೇಲೆ ನಡೆದಿರುವ ಆಕ್ರಮಣವಾಗಿದೆ. ಧರ್ಮದ ಹೆಸರಿನಲ್ಲಿ ಮಾಡುವಂತಹ ಇಂತಹ ನೀಚ, ಹೇಡಿತನದ ಕೃತ್ಯಕ್ಕೂ ಧರ್ಮಕ್ಕೆ ಸಂಬಂಧವಿಲ್ಲ. ಇಂತಹ ಕೃತ್ಯ ಎಸಗುವವರದ್ದ ಒಂದೆ ಧರ್ಮ, ಅದು ಭಯೋತ್ಪಾದನೆ ಎಂದರು.
ಕಣಿವೆ ರಾಜ್ಯದಿಂದ ಹಾಗೂ ದೇಶದಿಂದ ಭಯೋತ್ಪಾದನೆಯನ್ನು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಮತ್ತು ಶಾಂತಿ ಸ್ಥಾಪಿಸಲು ಆಗ್ರಹಿಸಿದ ಸೈಯದ್ ಮುಹಮ್ಮದ್ ತನ್ವೀರ್, ಕೇಂದ್ರ ಸರ್ಕಾರ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಇದೆ ಸಂದರ್ಭ ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರಿಫ್, ಎಸ್.ಎಂ.ಪಾಟೀಲ್ ಗಣಿಹಾರ, ನ್ಯಾಯವಾದಿ ಬಶೀರ್ ಲಾಹುರಿ, ಮೌಲಾನ ಶಾಕೀರ್, ಮೌಲಾನಾ ಜಬ್ಬಾರ್, ಅಸ್ಲಮ್, ಅಬ್ದುರ್ರಝಾಕ್ ಟಕ್ಕಳಕಿ ಮತ್ತಿತರರು ಉಪಸ್ಥಿತರಿದ್ದರು.