1 ಲಕ್ಷ ಲಂಚ ಸ್ವೀಕಾರ ಆರೋಪ: ಪಿಡಿಓ ಎಸಿಬಿ ಬಲೆಗೆ
ಬೆಂಗಳೂರು, ಫೆ.20: ಕೃಷಿ ಜಮೀನನ್ನು ವಾಣಿಜ್ಯ ಉಪಯೋಗಕ್ಕೆ ಬದಲಾವಣೆ ಮಾಡಿಸಲು ನಿರಪೇಕ್ಷಣಾ ಪತ್ರ (ಎನ್ಓಸಿ) ಪಡೆಯಲು 1 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ಬಿಡದಿಯ ಮಂಚನಾಯಕನ ಹಳ್ಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶಮೀದ್ ಓಲೆಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ ಆರ್ಪಿಸಿ ಲೇಔಟ್ನ ವೈದ್ಯರೊಬ್ಬರು ಮಂಚನಾಯಕನ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಲ್ಲ ಕೆಂಪನಹಳ್ಳಿಯಲ್ಲಿನ 33 ಗುಂಟೆ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದರು. ಆಸ್ಪತ್ರೆ ನಿರ್ಮಾಣದ ಉದ್ದೇಶಕ್ಕಾಗಿ ವಾಣಿಜ್ಯ ಉಪಯೋಗದ ಬದಲಾವಣೆ ಮಾಡಿಸಲು ಮೂಲಭೂತ ಸೌಕರ್ಯಗಳ ಬಗ್ಗೆ ಎನ್ಓಸಿ ಪಡೆಯಲು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ಎನ್ಓಸಿ ನೀಡಲು ಪಿಡಿಓ ಶಮೀದ್ ಓಲೆಕರ್, 1 ಲಕ್ಷ ಲಂಚ ಕೇಳಿದ್ದು, ಆ ಹಣವನ್ನು ವೈದ್ಯರು ನೀಡುತ್ತಿದ್ದಾಗ ದಾಳಿ ನಡೆಸಿದ ರಾಮನಗರ ಎಸಿಬಿ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story