ನಿಧಿ ಆಸೆಗೆ ತನ್ನ ಅಜ್ಜಿಯನ್ನೇ ಕೊಂದ ಮೊಮ್ಮಗ!
ಶಿರಸಿ, ಫೆ.21: ನಿಧಿಗಾಗಿ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿದ ಘಟನೆ ತಾಲೂಕಿನ ಬದನಗೋಡ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಗೊಲ್ಲರ್ (75) ಮೊಮ್ಮಗನಿಂದ ಕೊಲೆಯಾದ ಅಜ್ಜಿ. ರಮೇಶ್ ಗೊಲ್ಲರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಬುಧವಾರ ರಾತ್ರಿ ವೇಳೆ ಮಲಗಿದ್ದ ತನ್ನ ಅಜ್ಜಿಯ ಕುತ್ತಿಗೆ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ರಮೇಶ್ ಗೊಲ್ಲರ್ ಈ ಹಿಂದೆ ಮಳಗಿ ಡ್ಯಾಮ್ ಬಳಿ ಬಾಲಕನೋರ್ವವನನ್ನು ಕೊಲೆ ಮಾಡಿ ಮುಂಡಗೋಡಿನಲ್ಲಿ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ.
ಈ ವೇಳೆ ಪೊಲೀಸರ ಎದುರು ಕನಸಿನಲ್ಲಿ ಹುಲಿಯಮ್ಮ ದೇವರು ಬಂದು ನಿನಗೆ ನಿಧಿ ಸಿಗುತ್ತದೆ ಅದಕ್ಕಾಗಿ ನೀನು ಐದು ನರಬಲಿ ಕೊಡಬೇಕು ಎಂಬುದಾಗಿ ಹೇಳಿತ್ತಂತೆ ಎಂದು ಕೊಲೆ ಮಾಡಿರುವ ವೃತ್ತಾಂತವನ್ನು ಬಿಡಿಸಿಟ್ಟಿದ್ದ. ನಂತರ ಜಾಮೀನಿನ ಮೂಲಕ ಇತ್ತೀಚೆಗೆ ಹೊರ ಬಂದಿದ್ದ ರಮೇಶ್ ಗೊಲ್ಲರ್ ನಿಧಿಯ ಆಸೆಗೆ ಎರಡನೇ ಬಲಿಯಾಗಿ ತನ್ನ ಅಜ್ಜಿಯ ಕೊಲೆ ಮಾಡಿದ್ದಾನೆ. ಈ ಕುರಿತು ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.