ಕಾಂಗ್ರೆಸ್ನಿಂದಲೇ ಸ್ಪರ್ಧೆ, ಜೆಡಿಎಸ್ ಆಹ್ವಾನ ನೀಡಿಲ್ಲ : ಸುಮಲತಾ ಅಂಬರೀಶ್ ಸ್ಪಷ್ಟನೆ
"ಮಂಡ್ಯ ಜನರ ಋಣ ತೀರಿಸಲು ರಾಜಕೀಯ ಪ್ರವೇಶ"
ಕಾಳಮುದ್ದನದೊಡ್ಡಿ, ಫೆ.21: ಮಂಡ್ಯ ಜಿಲ್ಲೆಯ ಜನತೆಯ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ಚಿತ್ರನಟಿ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಈ ವಿಷಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ತಂದಿದ್ದೇನೆ. ಕಾಂಗ್ರೆಸ್ ಪಕ್ಷ ನಮ್ಮನ್ನು ಗುರಿತಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಅಂಬಿ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸವನ್ನು ಕಾಂಗ್ರೆಸ್ ಪಕ್ಷವು ಅವರ ಕುಟುಂಬದ ಸದಸ್ಯರಿಗೂ ಮುಂದುವರಿಸಿಕೊಂಡು ಹೋಗುವರೆಂದು ಆಶಿಸಿರುವುದಾಗಿ ಹೇಳಿದ್ದಾರೆ.
ಮನೆದೇವರು ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಮಾತನಾಡಿದ ಅವರು, ಅಂಬರೀಶ್ ಹುಟ್ಟೂರು ಜಿಲ್ಲೆಯಲ್ಲಿ ಬಿಟ್ಟರೆ ಇನ್ನೆಲ್ಲೂ ಈ ಪ್ರೀತಿ ನನಗೆ ಸಿಕ್ಕಿಲ್ಲ ಎಂದು ಭಾವುಕರಾದರು. ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಲು ಇಚ್ಚಿಸಿದ್ದೇನೆ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಅದ್ದೂರಿ ಸ್ವಾಗತ: ಚಿತ್ರನಟಿ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಂತೆ ರಸ್ತೆಯುದ್ದಕ್ಕೂ ಅಭಿಮಾನಿಗಳ ಮಹಾಪೂರ ಹರಿದು ಬಂದಿತು. ದಾರಿ ಉದ್ದಕ್ಕೂ ಅಭಿಮಾನಿಗಳು ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳಿಂದ ಒತ್ತಾಯ ಕೇಳಿಬಂದಿತು.