ಕಟ್ಟಡದ ಮೂರನೇ ಅಂತಸ್ತಿನಿಂದ ಬಿದ್ದು ಕಾರ್ಮಿಕ ಸಾವು
ಸಕಲೇಶಪುರ,ಫೆ.22: ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಕಟ್ಟಡ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ದೊಡ್ಡನಾಗರ ಬಳಿ ನಡೆದಿದೆ.
ಬಿಹಾರ ಮೂಲದ ಎಮ್.ಡಿ ನೌಷದ್ (22) ಮೃತ ಪಟ್ಟ ಯುವಕ. ಯಾವುದೇ ಜೀವ ರಕ್ಷಕ ಸುರಕ್ಷಾ ವ್ಯವಸ್ಥೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಕಟ್ಟಡದ ಮೂರನೇ ಅಂತಸ್ತಿನಲ್ಲಿ ಒಂದುವರೆ ಟನ್ ತೂಕದ ಎಲೆಕ್ಟ್ರಿಕ್ ಕಬ್ಬಿಣದ ಬಾಕ್ಸ್ ಒಂದನ್ನು ಸಾಗಿಸುವ ಸಂದರ್ಭ ಕಾಲು ಜಾರಿ ಕೆಳಗಿನ ನೆಲ ಅಂತಸ್ತಿಗೆ ಬಿದ್ದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತ ನೌಷದ್ ಬೆಂಗಳೂರಿನ ಜಿಪಿಎಸ್ ಎಲೆಕ್ಟ್ರಿಕಲ್ ಕಂಪೆನಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, ಕಳೆದ ಆರು ತಿಂಗಳಿನಿಂದ ದೊಡ್ಡನಾಗರದ ಗ್ರಾಮದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ.
ಮೃತದೇಹವನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.