ಜೆಡಿಎಸ್ ನವರು ನನ್ನ ಜೊತೆ ಚರ್ಚೆ ನಡೆಸಿಲ್ಲ: ನಟಿ ಸುಮಲತಾ
ಮೈಸೂರು,ಮಾ.2: ನಟಿ ಹಾಗೂ ದಿ.ಅಂಬರೀಷ್ ಅವರ ಪತ್ನಿ ಸುಮಲತಾ ಶನಿವಾರ ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಇಂದು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಸುತ್ತೂರು ಶ್ರೀಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಬಳಿಕ ಸ್ವಾಮೀಜಿಗಳೊಂದಿಗೆ ಉಭಯಕುಶಲೋಪರಿ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಯವರು ನಮ್ಮ ಕುಟುಂಬಕ್ಕೆ ಮೊದಲಿನಿಂದಲೂ ಪರಿಚಯ. ಹೀಗಾಗಿ ಇಂದು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದಿದ್ದೇನೆ. ಹಾಗೂ 'ಅಭಿ'ಯ ಸಿನಿಮಾದ ಬಗ್ಗೆ ಕೂಡ ಸ್ವಾಮೀಜಿ ಅವರೊಂದಿಗೆ ಮಾತನಾಡಿದ್ದೇನೆ. ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಜನರ ಅಭಿಪ್ರಾಯ ಸಂಗ್ರಹಿಸಲು ಮಂಡ್ಯ ಜಿಲ್ಲೆಯ ಪ್ರವಾಸ ಮಾಡುತ್ತಿದ್ದೇನೆ. ಇಂದು ಕೂಡ ಕೆ.ಆರ್.ನಗರಕ್ಕೆ ಭೇಟಿ ನೀಡಲಿದ್ದೇನೆ. ರಾಜಕೀಯ ಬೆಳವಣಿಗೆ ನಿಮಗೆ ಗೊತ್ತಿದೆ. ಹಾಗಾಗಿ ಸದ್ಯಕ್ಕೆ ಏನೂ ಆಗಿಲ್ಲ. ಬೆಳವಣಿಗೆ ಇದ್ದರೆ ಮಾತನಾಡುತ್ತೇನೆ. ಜೆಡಿಎಸ್ನಿಂದ ನನ್ನ ಜೊತೆ ಯಾರೂ ಚರ್ಚೆ ನಡೆಸಿಲ್ಲ ಎಂದರು.
ಈ ಸಂದರ್ಭ ನಟರಾದ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸುಮಲತಾ ಜೊತೆಗಿದ್ದರು.