ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷಿ ಕೇಳುವವರನ್ನು ಪಾಕಿಸ್ತಾನಕ್ಕೆ ಒಗೆದು ಬಿಡಬೇಕು: ಬಿಜೆಪಿ ಶಾಸಕ ಯತ್ನಾಳ್
ವಿಜಯಪುರ,ಮಾ.4: ಕಲಬುರ್ಗಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉಮೇಶ್ ಜಾಧವ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ. ಹಂತ ಹಂತವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಖಾಲಿ ಆಗುತ್ತವೆ. ಜಾಧವ್ ಓಪನಿಂಗ್ ಮಾಡಿದ್ದಾರೆ. ಇನ್ನು ಸಮಾರೋಪ ಯಾವಾಗ ಆಗುತ್ತದೆ ನೋಡೋಣ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು.
ಉಮೇಶ್ ಜಾಧವ್ ರಾಜೀನಾಮೆಯನ್ನು ಸ್ವಾಗತಿಸುತ್ತೇನೆ. ಬಿಜೆಪಿ ಸರ್ಕಾರ ರಚಿಸಲು ಎಷ್ಟು ಬೇಕು ಅಷ್ಟು ಶಾಸಕರು ನಮ್ಮ ಜೊತೆಗೆ ಬರುತ್ತಾರೆ ಎಂದು ಹೇಳಿದರು.
ಸುಮಲತಾ ಬಿಜೆಪಿಗೆ ಬಂದರೆ ಮಂಡ್ಯದಿಂದ ಟಿಕೆಟ್ ಕೊಡುವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ದಿವಂಗತ ಅಂಬರೀಶ್ ಅವರಿಗೆ ಮಂಡ್ಯದಲ್ಲಿ ಗೌರವ ಇದೆ. ಮಂಡ್ಯದಲ್ಲಿ ಅಂಬರೀಶ್ ಕುಟುಂಬದ ಒಂದು ದೊಡ್ಡ ಅಲೆ ಇದೆ ಎಂದರು.
ನಾನು ಲೋಕಸಭಾ ಚುನಾವಣೆಗೆ ಹೋಗುವುದೇ ಇಲ್ಲ ಎಂದು ದೇವೆಗೌಡ ಹೇಳುತ್ತಾರೆ. ಆದರೂ ಮತ್ತೆ ಚುನಾವಣೆಗೆ ನಿಲ್ಲುತ್ತಾರೆ. ಇದು ಅವರ ಕೊನೆಯ ಚುನಾವಣೆ. ನಾಟಕ ಮಾಡೋದು ದೇವೆಗೌಡ ಬಿಡಬೇಕು. ನಿಲ್ಲುವುದಿದ್ರೆ ಚುನಾವಣೆಯಲ್ಲಿ ನಿಲ್ಲಬೇಕು, ಇಲ್ಲವೇ ಮನೆಯಲ್ಲಿ ಕುಳಿತು ಕೊಳ್ಳಬೇಕು. ಸುಳ್ಳು ಹೇಳೋದು ಬಿಡಬೇಕು ಎಂದು ಕಿಡಿಕಾರಿದರು.
ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷಿ ಕೇಳುವವರನ್ನು ಸರ್ಜಿಕಲ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ. ಅವರು ಅಲ್ಲಿಯೇ ಭಾರತೀಯ ಸೇನೆಯ ಪರಾಕ್ರಮ ವೀಕ್ಷಿಸಲಿ ಎಂದು ಕೇಜ್ರೀವಾಲ್, ಮಮತಾ ಬ್ಯಾನರ್ಜಿ, ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಭಾರತೀಯರು ಆಟದಲ್ಲಿ ಗೆದ್ದಾಗ, ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದಾ? ಸೀತಾರಾಮ ಕಲ್ಯಾಣ ಸಿನೆಮಾ ನೋಡಿ ಸಂಭ್ರಮಿಸಬೇಕಾ? ಎಂದು ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.