ಪತ್ನಿಯ ಶೀಲ ಶಂಕಿಸಿ ಕತ್ತು ಕುಯ್ದು ಕೊಲೆಗೈದ ಪತಿ
ಮಂಡ್ಯ, ಮಾ.8: ಪತ್ನಿಯ ಶೀಲ ಶಂಕಿಸಿ ಪತಿ ಕತ್ತು ಕುಯ್ದು ಕೊಲೆ ಮಾಡಿ, ಬಳಿಕ ತಾನೂ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ಮೆಳ್ಳಹಳ್ಳಿ ಗರೀಬಿ ಕಾಲಯಲ್ಲಿ ನಡೆದಿದೆ.
ಉಮಾ(28) ಕೊಲೆಯಾದ ಮಹಿಳೆ. ತೀವ್ರವಾಗಿ ಗಾಯಗೊಂಡ ಈಕೆಯ ಪತಿ ಹಾಗೂ ಕೊಲೆ ಆರೋಪಿ ನಾಗೇಶ್ನನ್ನು(42) ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ(ಮಿಮ್ಸ್)ಗೆ ದಾಖಲಿಸಲಾಗಿದೆ.
ಕಳೆದ ಆರು ವರ್ಷದ ಹಿಂದೆ ಉಮಾ ಮತ್ತು ನಾಗೇಶ್ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ನಿತ್ಯ ಜಗಳ ಆಗುತ್ತಿತ್ತು. ಇದೇ ವಿಚಾರಕ್ಕೆ ಶುಕ್ರವಾರ ಮುಂಜಾನೆ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ತಾನೂ ಕತ್ತು ಕೊಯ್ದುಕೊಂಡು ನಾಗೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಎರಡನೇ ಮದುವೆ: ಪತ್ನಿಯನ್ನು ಹತ್ಯೆ ಮಾಡಿದ ನಾಗರಾಜು ಈ ಮೊದಲು ಲತಾ ಎಂಬಾಕೆಯನ್ನು ಮದುವೆಯಾಗಿದ್ದ. ಕಾರಣಾಂತರಗಳಿಂದ ಆಕೆ ಸ್ವಲ್ಪ ದಿನಗಳಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆರು ವರ್ಷಗಳ ಹಿಂದೆ ಉಮಾಳನ್ನು ಮದುವೆಯಾಗಿದ್ದ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.