ಶಸ್ತ್ರಾಸ್ತ್ರಗಳನ್ನು ಮಾ.18 ರೊಳಗೆ ಠೇವಣಿ ಮಾಡಿ: ಕೊಡಗು ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ, ಮಾ.13: ಲೋಕಸಭಾ ಚುನಾವಣೆ ಸಂದರ್ಭ ಅಕ್ರಮ, ಅವ್ಯವಹಾರಗಳನ್ನು ತಡೆಯಲು ಹಾಗೂ ಶಾಂತಿ ಪಾಲನೆಗಾಗಿ ಆಯುಧ ರಹದಾರಿ ಹೊಂದಿರುವವರ ಶಸ್ತ್ರಾಸ್ರಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಮಾ.18 ರೊಳಗೆ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕ್ರಿಮಿನಲ್, ರೌಡಿ ಶೀಟರ್, ಕಮ್ಯೂನಲ್ ಗೂಂಡಾ ಮುಂತಾದ ಹಿನ್ನೆಲೆಯಿರುವ, ಈ ಹಿಂದಿನ ಚುನಾವಣಾ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರಗಳನ್ನು ದುರ್ಬಳಕೆ ಮಾಡಿದ ಹಿನ್ನಲೆಯಿರುವ ಹಾಗೂ ಚುನಾವಣಾ ಸಮಯದಲ್ಲಿ ಬೆದರಿಕೆ ಒಡ್ಡುವವರು ಆಯುಧಗಳನ್ನು ಹಾಗೂ ಜಿಲ್ಲೆಯಲ್ಲಿ ಆತ್ಮರಕ್ಷಣೆ ಮತ್ತು ಬೆಳೆ ರಕ್ಷಣೆಗಾಗಿ ಹೊಂದಿರುವ ಆಯುಧಗಳನ್ನು ಠೇವಣಿ ಇಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಶಸ್ತ್ರಾಸ್ತ್ರಗಳನ್ನು ಒಯ್ಯುವ ಅಥವಾ ಹಿಡಿದುಕೊಂಡು ಓಡಾಡುವುದನ್ನು ಮೇ 27 ರವರೆಗೆ ನಿಷೇಧಿಸಲಾಗಿದೆ. ಈ ಆದೇಶದ ಉಲ್ಲಂಘನೆಯು ಐ.ಪಿ.ಸಿ. ಸೆಕ್ಷನ್ 188 ರಡಿ ದಂಡನೀಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.