ಸಾಲಬಾಧೆ: ಆತ್ಮಹತ್ಯೆಗೆ ಶರಣಾದ ಮಹಿಳೆ
ಪಾಂಡವಪುರ,ಮಾ.14: ಸಾಲಬಾಧೆ ತಾಳಲಾರದೇ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಡಿಂಕಾ ಗ್ರಾಮದ ನಿವಾಸಿ ಶಿವಕುಮಾರ್ ಅವರ ಪತ್ನಿ ರುದ್ರಮ್ಮ (53) ಮೃತ ಮಹಿಳೆ.
ಡಿಂಕಾ ಗ್ರಾಮದಲ್ಲಿ ಕೂಲಿ ಮಾಡುತ್ತಿದ್ದ ಶಿವಕುಮಾರ್ ಹಾಗೂ ಅವರ ಪತ್ನಿ ರುದ್ರಮ್ಮ ಅವರು ಗ್ರಾಮ ಶಕ್ತಿ ಬ್ಯಾಂಕ್ನಲ್ಲಿ 50 ಸಾವಿರ ರೂ. ಬ್ಯಾಂಕ್ ಸಾಲ, ಪ್ಯೂಚರ್ ಪ್ರೈವೆಟ್ ಲಿಮಿಟೆಡ್ನಲ್ಲಿ 50 ಸಾವಿರ ರೂ., ಹಾಗೂ 2 ಲಕ್ಷ ರೂ.ಗಳ ವರೆಗೆ ಕೈಸಾಲ ಮಾಡಿದ್ದರು ಎನ್ನಲಾಗಿದೆ.
ಪ್ಯೂಚರ್ ಪ್ರೈವೆಟ್ ಲಿಮಿಟೆಡ್ ಮತ್ತು ಗ್ರಾಮಶಕ್ತಿ ಬ್ಯಾಂಕಿನವರು ದಿನನಿತ್ಯ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ಕೊಡುತ್ತಿದ್ದರು. ಸಾಲ ತೀರಿಸುವುದಾಗಿ ಹೇಳಿದ್ದರೂ ಪದೇ ಪದೇ ಮನೆ ಬಳಿ ಹಾಗೂ ಕೆಲಸ ಮಾಡುತ್ತಿದ್ದ ವೇಳೆ ಹೊಲದ ಹತ್ತಿರ ಬಂದು ಕಿರುಕುಳ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತು ಮಧ್ಯಾಹ್ನ ತಮ್ಮ ಜಮೀನಿನ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ಮಹಿಳೆ ಕಡು ಬಡವರಾಗಿದ್ದು, ರುದ್ರಮ್ಮ ಅವರ ಮಗ ಮಲ್ಲಿಕಾರ್ಜುನ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.