ಜಾಲತಾಣದಲ್ಲಿ ಟ್ರೋಲ್ ಆದ ‘ನಿಖಿಲ್ ಎಲ್ಲಿದ್ದೀಯಪ್ಪ’
ಬೆಂಗಳೂರು, ಮಾ. 15: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುರಿತು ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಎಚ್ಡಿಕೆಯವರ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ನಿಖಿಲ್ ಅಭಿನಯದ ‘ಜಾಗ್ವಾರ್’ ಸಿನಿಮಾ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಕುಮಾರಸ್ವಾಮಿ ಸಂವಾದದ ಆಡಿಯೋ ರೀಮಿಕ್ಸ್ ಮಾಡಲಾಗಿದೆ. ಆ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣವನ್ನು ಜಾಲತಾಣದಲ್ಲಿ ಅಣಕ ಮಾಡಲಾಗಿದೆ.
ಕುಮಾರಸ್ವಾಮಿ ಮೈಕ್ ಹಿಡಿದು ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೂಗುತ್ತಾರೆ. ಸಭಿಕರ ಮಧ್ಯದಲ್ಲಿ ನಿಂತಿದ್ದ ನಿಖಿಲ್ ಕೈ ಮೇಲೆತ್ತುತ್ತಾರೆ. ‘ಓ ನೀನೂ ಈಗಾಗಲೇ ಜನಗಳ ಮಧ್ಯೆ ಸೇರಿಬಿಟ್ಟಿದ್ದೀಯಾ. ಜನಗಳ ಆಶೀರ್ವಾದ ಪಡೆಯಲು ಜನಗಳ ಜತೆ ಸೇರಿದ್ದೀಯ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸುತ್ತಾರೆ.
ಇದಕ್ಕೆ ನಿಖಿಲ್, ‘ನಿಮ್ಮನ್ನು-ತಾತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಈ ಜನಗಳ ಮಧ್ಯೆ ಇದ್ದೀನಿ ಅಪ್ಪಾ’ ಎಂದು ಪ್ರತ್ಯುತ್ತರ ನೀಡುತ್ತಾರೆ. ‘ಥ್ಯಾಂಕ್ಯೂ, ಥ್ಯಾಂಕ್ಯೂ... ಅದನ್ನ ಬೆಳೆಸಿಕೊಳ್ಳಬೇಕು. ಈ ನಾಡಿನ ಜನತೆ ಬಗ್ಗೆ ಗೌರವವನ್ನು ನೀನು ಇಟ್ಟುಕೊಳ್ಳಬೇಕು’ ಎಂದು ಕುಮಾರಸ್ವಾಮಿ ಹೇಳುತ್ತಾರೆ.
ಮೇಲ್ಕಂಡ ಸಂಭಾಷಣೆಯನ್ನು ಹಳ್ಳಿ ಮೇಷ್ಟ್ರು ಸಿನಿಮಾ ದೃಶ್ಯಕ್ಕೆ, ಕಾವೇರಿ ನೀರಿಗೆ, ಹೀಗೆ ಹಲವು ರೀತಿಯಲ್ಲಿ ರೀಮಿಕ್ಸ್ ಮಾಡಿದ್ದು, ‘ನಿಖಿಲ್ ಎಲ್ಲಿದ್ದೀಯಪ್ಪ, ಓ ನೀನೂ ಈಗಾಗಲೇ ಜನಗಳ ಮಧ್ಯೆ ಸೇರಿಬಿಟ್ಟಿದ್ದೀಯಾ’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಆಗುತ್ತಿದೆ.