ವ್ಯಕ್ತಿಯ ಕೊಲೆ ಯತ್ನ ಪ್ರಕರಣ: ಆರೋಪಿಗಳಿಗೆ 7 ವರ್ಷ ಸಜೆ
ಮಂಡ್ಯ, ಮಾ.16: ವ್ಯಕ್ತಿಯೊಬ್ಬನ ಮುಂಗೈ ಕತ್ತರಿಸಿ ಕೊಲೆ ಯತ್ನ ನಡೆಸಿದ್ದ ಮೂವರು ಆರೋಪಿಗಳಿಗೆ 7 ವರ್ಷ ಸಜೆ, ತಲಾ 50 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸದಿದ್ದರೆ ಒಂದು ವರ್ಷ ಸಾದಾ ಸಜೆ ವಿಧಿಸಲಾಗಿದೆ.
ಮದ್ದೂರಿನ ಸೂರಜ್ ಗೌಡ, ಅಕ್ಷಯ ಹಾಗೂ ರೇವಂತ್ ಎಂಬುವರು ಶಿಕ್ಷೆಗೆ ಗುರಿಯಾದವರಾಗಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ಮಂಡ್ಯದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯ್ಯಿದ್ ಬಲಿಗುರ್ ರೆಹಮಾನ್ ಅವರು ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ 1,45,000 ರೂ.ಗಳನ್ನು ಗಾಯಾಳುವಿಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
2017 ಜುಲೈ 16 ರಾತ್ರಿ ಮದ್ದೂರಿನಲ್ಲಿ ಆರೋಪಿಗಳು ವರುಣ್ಗೌಡ ಅವರ ಮೇಲೆ ಹಲ್ಲೆ ನಡೆಸಿ ಬಲಗೈ ತುಂಡರಿಸಿ ಕೊಲೆಗೆ ಯತ್ನಿಸಿದ್ದು, ಈ ಸಂಬಂಧ ಮದ್ದೂರು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಉಳಿದ ಆರೋಪಿಗಳಾದ ಅವಿನಾಶ್, ಅಭಿಕುಮಾರ ಮತ್ತು ವೇಣಗೋಪಾಲ ಆರೋಪ ಮುಕ್ತರಾಗಿದ್ದಾರೆ. ಸರಕಾರಿ ಅಭಿಯೋಜಕ ಎ.ಪಿ.ಫಿರೋಜ್ಖಾನ್ ಸರಕಾರದ ಪರವಾಗಿ ವಾದ ಮಂಡಿಸಿದರು.
Next Story