ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ: ಸಚಿವ ಸಾ.ರಾ.ಮಹೇಶ್ ಹೇಳಿಕೆಗೆ ಸಿದ್ದರಾಮಯ್ಯ ಗರಂ
ಮೈಸೂರು,ಮಾ.17: ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಸಚಿವ ಸಾ.ರಾ.ಮಹೇಶ್ ಹೇಳಿಕೆ ತಪ್ಪು, ಅದು ಸರಿಯಲ್ಲ ಎಲ್ಲದಕ್ಕೂ ನಂಬಿಕೆ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರಕ್ಕೆ ಗರಂ ಆದರು.
ನಗರದ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಸಚಿವ ಸಾ.ರಾ.ಮಹೇಶ್ ಮಂಡ್ಯದಲ್ಲಿ ಕಾಂಗ್ರೆಸ್ನವರು ಕೈಕೊಟ್ಟರೆ ಮೈಸೂರಿನಲ್ಲಿ ನಾವು ಸಹ ಕೈಕೊಡಬೇಕಾಗುತ್ತದೆ ಎಂಬ ಹೇಳಿಕೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಸಚಿವ ಸಾ.ರಾ.ಮಹೇಶ್ ಹೇಳಿಕೆ ಸರಿಯಲ್ಲ, ನಾವು ಪರಸ್ಪರ ನಂಬಿಕೆ ಮೇಲೆ ಮೈತ್ರಿ ಮಾಡಿಕೊಂಡಿದ್ದೇವೆ. ಎಲ್ಲದಕ್ಕೂ ನಂಬಿಕೆ ಇರಬೇಕು, ಈ ರೀತಿಯ ಹೇಳಿಕೆಗಳೀಂದ ನಂಬಿಕೆ ಹಾಳಾಗುತ್ತದೆ. ನಾವು ಒಟ್ಟಾಗಿ ಕೆಲಸ ಮಾಡೊಲ್ಲ, ಅಲ್ಲಿ ಹಾಗಾಗುತ್ತದೆ ಹೀಗಾಗುತ್ತೆ ಅಂತ ಊಹೆ ಮಾಡಿಕೊಳ್ಳುವುದು ತಪ್ಪು, ಯಾಕೆ ಅದನ್ನೆಲ್ಲ ಊಹೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ನಮ್ಮ ನಂಬಿಕೆ ಬಗ್ಗೆ ದೇವೇಗೌಡರಾಗಲಿ ಕುಮಾರಸ್ವಾಮಿಯಾಗಲಿ ಎಲ್ಲಿಯಾದರೂ ಮಾತನಾಡಿದ್ದಾರ? ಮತ್ತೆ ಸಾ.ರಾ.ಮಹೇಶ್ ಏಕೆ ಮಾತನಾಬೇಕು, ಬೇರೆಯವರ ಮಾತಿಗೆಲ್ಲ ತೆಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ನಾವಿನ್ನೂ ಪ್ರಚಾರವನ್ನೇ ಶುರು ಮಾಡಿಲ್ಲ, ಕೂಡು ಹುಟ್ಟೋಕು ಮುಂಚೆ ಕುಲಾವಿ ಬಗ್ಗೆ ಯಾಕೆ ಮಾತು. ಸಭೆ ನಡೆಸಿ ಪ್ರಚಾರದ ರೂಪು ರೇಷೆ ಬಗ್ಗೆ ಚರ್ಚೆ ಮಾಡುತ್ತೀವಿ ಎಂದು ಹೇಳಿದರು.
ಬಿಜೆಪಿಯವರಿಗೆ ಮೋದಿ ಬಿಟ್ಟರೆ ಬೇರೆ ಏನಿಲ್ಲ: ಬಿಜೆಪಿಯವರಿಗೆ ಮೋದಿ ಬಿಟ್ಟರೆ ಬೇರೆ ಏನು ಇಲ್ಲ, ರಾಜ್ಯದ ನಾಯಕರಿಗೆ ಯಾವ ವರ್ಚಸ್ಸು ಇಲ್ಲ. ಮೋದಿ ಮುಖವೇ ಇವರಿಗೆ ಬಂಡವಾಳ ಎಂದು ರಾಜ್ಯ ಬಿಜೆಪಿ ನಾಯಕರ ಕುರಿತು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಿಜೆಪಿ ನಾಯಕರು ಬರಿ ಮೋದಿ ಮೋದಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ, ಅವರೇನು ಅಭಿವೃದ್ಧಿ ಮಾಡಿದ್ದಾರೆ. 10 ಕೋಟಿ ಉದ್ಯೋಗದ ಭರವಸೆ ನೀಡಿ ನಾಮ ಹಾಕಿದ್ದಾರೆ. ಮೋದಿಗೂ ಯಾವುದೇ ವರ್ಚಸ್ಸು ಇರಲಿಲ್ಲ, ಸರ್ಜಿಕಲ್ ಸ್ಟ್ರೈಕ್ ಮಾಡಿರೋದನ್ನೆ ಹೇಳಿಕೊಂಡು ವರ್ಚಸ್ಸು ವೃದ್ಧಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾಲದಲ್ಲೂ 10-12 ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿದೆ. ನಾವು ಅದನ್ನು ಹೇಳಿಕೊಂಡಿಲ್ಲ ಎಂದ ಅವರು, ದೇವೇಗೌಡರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಜೆಡಿಎಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ದೇವೇಗೌಡರೇ ರಾಹುಲ್ ಗಾಂದಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ನಾನು ದೇವೇಗೌಡರ ಮಾತನ್ನು ನಂಬುತ್ತೇನೆ. ಬೇರೆ ಯಾರೋ ನಾಯಕರು ಹೇಳಿದ್ದನ್ನು ನಾನು ನಂಬಲ್ಲ, ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಎಂದು ಹೇಳಿದರು.
ಮೋದಿ ಬೇರೆ ರಾಜ್ಯದಲ್ಲಿ ಚುನಾವಣೆಗೆ ನಿಲ್ಲಬಹುದು. ರಾಹುಲ್ ಗಾಂಧಿ ನಿಲ್ಲಬಾರದ ಎಂದು ಪ್ರಶ್ನಿಸಿದ ಅವರು ರಾಹುಲ್ ಗಾಂಧಿಯವರನ್ನು ಕರ್ನಾಟಕದಿಂದ ಸ್ಪರ್ಧಿಸಲು ಆಹ್ವಾನಿಸಿದ್ದೇವೆ. ಅವರಿನ್ನು ತೀರ್ಮಾನ ಮಾಡಿಲ್ಲ ಮೋದಿ ಎರಡೆರಡು ಕಡೆ ನಿಂತಿರಲಿಲ್ವಾ? ವಾರಣಾಸಿ ಬೇರೆ ರಾಜ್ಯ ತಾನೆ? ಹಾಗೆ ರಾಹುಲ್ ಗಾಂಧಿಯವರು ನಿಲ್ಲಲಿ ಬಿಡಿ. ರಾಹುಲ್ ಅವರ ಅಜ್ಜಿ, ಅಮ್ಮ ಎಲ್ಲ ಇಲ್ಲೆ ನಿಂತಿದ್ದರು. ಹಾಗಾಗಿ ಅವರು ನಿಲ್ಲಲಿ ಅನ್ನೋದು ನಮ್ಮ ಆಸೆ. ಆದರೆ ಈ ಬಗ್ಗೆ ಅವರು ಇನ್ನು ನಿರ್ಧಾರ ಮಾಡಿಲ್ಲ ಎಂದರು.