ಹನೂರು ಉಪನೋಂದಣಾಧಿಕಾರಿ ಕಛೇರಿಯಲ್ಲಿ ಮಾರ್ಟ್ಗೇಜ್ಗೆ ಅಧಿಕ ಶುಲ್ಕ: ರೈತರ ಆರೋಪ
ಹನೂರು: ಪಟ್ಟಣದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ರೈತರು ಮತ್ತು ಸಾರ್ವಜನಿಕರು ಸಹಕಾರ ಸಂಘ ಮತ್ತು ಇನ್ನಿತರ ಸರ್ಕಾರಿ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಮಾರ್ಟ್ಗೇಜ್ ಮಾಡಿಸಲು ಅಧಿಕ ನೋಂದಣಿ ಶುಲ್ಕ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಕಛೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.
ಸರ್ಕಾರ ರೈತರ ಸಾಲಮನ್ನಾ ಮಾಡಲಾಗಿದ್ದು, ಮತ್ತೆ ಸಾಲ ಪಡೆಯಲು ಹಾಗೂ ಇನ್ನಿತರ ಸಾಲ ಸೌಲಭ್ಯ ಪಡೆಯಲು ಪಟ್ಟಣದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಮಾರ್ಟ್ಗೇಜ್ ನೋಂದಾಣಿಗಾಗಿ ಕಳೆದೊಂದು ವಾರದಿಂದ ರೈತರು ಸಾರ್ವಜನಿಕರು ಕಛೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸಮಯ ಅನುಸಾರವಾಗಿ ಜನಸಂಖ್ಯೆಗೆ ಅನುಗುಣವಾಗಿ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಅದನ್ನು ಕೆಲವರು ಸ್ವಾರ್ಥಕ್ಕಾಗಿ ಬಳಿಸಿಕೊಂಡು ಹೆಚ್ಚುವರಿಯಾಗಿ ಹಣ ನೀಡಿದವರಿಗೆ ಟೋಕನ್ ನೀಡುವುದು, ಮತ್ತು ಸರ್ಕಾರಿ ಪರಿವರ್ತನಾ ಶುಲ್ಕ 35, ಪರಿಶೋಧನೆ ಮತ್ತು ಪರಿವೀಕ್ಷಣೆ ಶುಲ್ಕ 40 ರೂ. ಸ್ಕ್ಯಾನಿಂಗ್ 280 ಒಟ್ಟು 355 ರೂ.ಗಳು ಸರ್ಕಾರಿ ಶುಲ್ಕವಾಗಿ ನಿಗಧಿಯಾಗಿರುತ್ತದೆ. ಆದರೆ ಕಛೇರಿ ಸಿಬ್ಬಂದಿಗಳು ಹೆಚ್ಚುವರಿಯಾಗಿ 900 ರೂ. ಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಎಂದು ರೈತರು ಆರೋಪಿಸಿದ ಹಿನ್ನೆಲೆ ಜಯ ಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷ ವಿನೋದ್ ಹಾಗೂ ಮುಖಂಡ ರಾಜಶೇಖರ್ ಮೂರ್ತಿ, ವೃಷಬೇಂದ್ರ ಮೂರ್ತಿ ಹಾಗೂ ಪಟ್ಟಣದ ಇನ್ನಿತರರು ಪಟ್ಟಣದ ವೃತ್ತ ನಿರೀಕ್ಷಕ ಮೋಹಿತ್ ಸಹದೇವ್ರವರಿಗೆ ಮೌಖಿಕವಾಗಿ ದೂರು ತಿಳಿಸಿದರು.
ವಿಚಾರಣೆ ನಡೆಸಿದ ವೃತ್ತನಿರೀಕ್ಷಕ ಮೋಹಿತ್ ಸಹದೇವ್ ಮೌಖಿಕವಾಗಿ ದೂರು ನೀಡುವ ಬದಲು ಹೆಚ್ಚುವರಿ ಹಣ ಪಡೆದಿರುವ ಬಗ್ಗೆ ದಾಖಲೆ ಇದ್ದರೆ ದಾಖಲೆ ಸಹಿತ ದೂರು ನೀಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದರು. ಉಪನೋಂದಣಾಧಿಕಾರಿ ನಂದೀಶ್ರವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ನಿಗಧಿತ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿಲ್ಲ. ಕಛೇರಿಯ ಸಿಬ್ಬಂಧಿಗಳು ಏನಾದರು ಹೆಚ್ಚುವರಿ ಹಣ ಪಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.