ಸಂಸದ ಕೆ.ಎಚ್.ಮುನಿಯಪ್ಪರಿಂದ ಪತ್ನಿ ಹೆಸರಲ್ಲಿ ಅಕ್ರಮ ಆಸ್ತಿ ಗಳಿಕೆ: ದಲಿತ ಮುಖಂಡರಿಂದ ಆರೋಪ
ಕೋಲಾರ, ಮಾ.19: ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಅಕ್ರಮವಾಗಿ ಕೊಡಗು ಜಿಲ್ಲೆಯ ಕುಂದಚ್ಚೇರಿ ಎಂಬ ಗ್ರಾಮದಲ್ಲಿ ಪತ್ನಿ ಹೆಸರಿನಲ್ಲಿ 204.42 ಎಕರೆ ಜಮೀನು ಆಸ್ತಿ ಗಳಿಕೆ ಮಾಡಿದ್ದಾರೆಂದು ಕೋಲಾರದಲ್ಲಿ ದಲಿತ ಮುಖಂಡರು ಆರೋಪಿಸಿದ್ದಾರೆ.
ಕೋಲಾರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಒಕ್ಕೂಟದ ಪದಾಧಿಕಾರಿಗಳಾದ ಸಿ.ಎಂ.ಮುನಿಯಪ್ಪ, ಕೋಲಾರದಲ್ಲಿ 28 ವರ್ಷಗಳ ಕಾಲ ಸಂಸದರಾಗಿರುವ ಮುನಿಯಪ್ಪರಿಂದ ಜಿಲ್ಲೆಗೆ ಕೊಡುಗೆ ಶೂನ್ಯ. ಜಿಲ್ಲೆಗೆ ಯಾವೊಂದು ಅಭಿವೃದ್ಧಿ ಕಾರ್ಯ ಮಾಡದ ಮುನಿಯಪ್ಪ ಸ್ವಹಿತಾಸಕ್ತಿಯಲ್ಲಿ ತೊಡಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಗಳನ್ನು ಶಾಸಕಿಯನ್ನಾಗಿಸಿದರು. ಈಗ ಅಕ್ರಮವಾಗಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಬಳಿಯ ಕುಂದಚ್ಛೇರಿ ಗ್ರಾಮದಲ್ಲಿ ಪತ್ನಿ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು.
2016ರಲ್ಲಿ ಜಮೀನು ಖರೀದಿಸಿರುವ ಮುನಿಯಪ್ಪ 2017 ಮತ್ತು 2018ರಲ್ಲಿ ಐಟಿ ರಿರ್ಟನ್ಸ್ನಲ್ಲಿ ತೋರಿಸದೆ ಸರ್ಕಾರಕ್ಕೂ ವಂಚಿಸಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ನಮ್ಮ ಹೋರಾಟವನ್ನು ಮುಂದಿನ ದಿನಗಳಲ್ಲಿ ಜನರ ಮಧ್ಯೆ ಕೊಂಡೊಯ್ಯುತ್ತೇವೆ. ನಮ್ಮ ಹೋರಾಟ ಕೆ.ಎಚ್.ಮುನಿಯಪ್ಪ ವಿರುದ್ಧವೇ ಯಾವುದೇ ಪಕ್ಷಗಳ ವಿರುದ್ಧವಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡ ಶ್ರೀಕೃಷ್ಣ, ಮು. ತಿಮ್ಮಯ್ಯ, ಟಿ. ವಿಜಯಕುಮಾರ್, ವಕ್ಕಲೇರಿ ರಾಜಪ್ಪ, ಅಂಬರೀಶ್, ವರದೇನಹಳ್ಳಿ ವೆಂಕಟೇಶ ಉಪಸ್ಥಿತರಿದ್ದರು.