ನನ್ನ ಬಗ್ಗೆ ಪ್ರಶ್ನೆ ಮಾಡುವಾಗ ಹುಷಾರಾಗಿರಬೇಕು: ಸಹೋದರನಿಗೆ ಮಧು ಬಂಗಾರಪ್ಪ ಎಚ್ಚರಿಕೆ
ಶಿವಮೊಗ್ಗ, ಮಾ. 19: ದಿವಂಗತ ಎಸ್.ಬಂಗಾರಪ್ಪ ಪುತ್ರರ ನಡುವೆ ಆರೋಪ-ಪ್ರತ್ಯಾರೋಪ ಶುರುವಾಗಿದೆ. ಮಂಗಳವಾರ ಜಿಲ್ಲೆಯ ವಿವಿಧೆಡೆ ಸಹೋದರರು ಪರಸ್ಪರ ಟೀಕಾ ಪ್ರಹಾರ ನಡೆಸಿದ್ದಾರೆ.
ಶಿವಮೊಗ್ಗದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರ್ ಬಂಗಾರಪ್ಪ ನಡೆಸಿದ ವಾಗ್ದಾಳಿಗೆ, ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ಸಮಾವೇಶದಲ್ಲಿ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಕುಮಾರ್ ಬಂಗಾರಪ್ಪ ದಿನಾಲು ಬೆಳಿಗ್ಗೆ ಇಲ್ಲಿ (ಸೊರಬ) ಸಿಗುತ್ತಿದ್ದನಾ ? ಏನು ಐದು ವರ್ಷ ಇಲ್ಲಿಯೇ ಗೂಟ ಹಾಕಿಕೊಂಡಿದ್ದರಾ. ನನ್ನ ಬಗ್ಗೆ ಪ್ರಶ್ನೆ ಮಾಡುವಾಗ ಹುಷಾರಾಗಿರಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಅಣ್ಣನ ಸಿನಿಮಾ ಓಡಲಿಲ್ಲವೆಂದೇ ಆತನನ್ನು ನಾನು ಇಲ್ಲಿಗೆ (ಸೊರಬದ ಚುನಾವಣೆಗೆ) ತಂದು ನಿಲ್ಲಿಸಿದ್ದು. ಆಗಲೇ ಆತನ ಸಿನಿಮಾ ರೀಲ್ ಕತ್ತರಿಸಿ ಹಾಕಬೇಕಾಗಿತ್ತು. ಆದರೆ ನನ್ನ ಹಣ ಹೋಗುತ್ತಿತ್ತು. ಅವನಿಗೆ ಯಾರೂ ಪ್ರೊಡ್ಯೂಸರ್ ಗಳೇ ಇಲ್ಲ. ಈ ಕಾರಣದಿಂದ ಯಡಿಯೂರಪ್ಪರ ಜೊತೆ ಹೋಗಿ ಸೇರಿಕೊಂಡಿದ್ದಾನೆ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ರಾಘವೇಂದ್ರರವರು ತಾವು ಮುಂದಿಟ್ಟಿರುವ ಪ್ರಶ್ನೆಗಳಿಗೆ ತಾಕತ್ತಿದ್ದರೆ, ಯೋಗ್ಯತೆಯಿದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಇದೇ ಸಂದರ್ಭ ವಾಗ್ದಾಳಿ ನಡೆಸಿದ್ದಾರೆ.