ಲೋಕಸಭೆ ಚುನಾವಣೆ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಬೆಂಗಳೂರು, ಮಾ. 21: ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೂ ಮೊದಲೇ ಬಿಜೆಪಿ, 21 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಸಚಿವ ಎ.ಮಂಜು ಹಾಸನ, ಡಾ.ಉಮೇಶ್ ಜಾಧವ್ ಕಲಬುರ್ಗಿ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಕ್ಷೇತ್ರದಿಂದ ಹೊಸಮುಖ ದೇವೆಂದ್ರಪ್ಪ ಹಾಗೂ ಚಿತ್ರದುರ್ಗ ಕ್ಷೇತ್ರದಿಂದ ಸ್ಥಳೀಯ ಶಾಸಕರ ವಿರೋಧದ ಮಧ್ಯೆ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ, ಮೈಸೂರು-ಕೊಡಗು-ಪ್ರತಾಪ ಸಿಂಹ, ವಿಜಯಪುರ-ರಮೇಶ್ ಜಿಗಜಿಣಗಿ, ಉತ್ತರ ಕನ್ನಡ-ಅನಂತಕುಮಾರ್ ಹೆಗಡೆ, ಬೆಂ.ಉತ್ತರ-ಡಿ.ವಿ.ಸದಾನಂದಗೌಡ, ಚಿಕ್ಕಬಳ್ಳಾಪುರ-ಬಿ.ಎನ್.ಬಚ್ಚೇಗೌಡ, ಬೆಂಗಳೂರು ಕೇಂದ್ರ-ಪಿ.ಸಿ.ಮೋಹನ್, ಚಾಮರಾಜನಗರ-ವಿ.ಶ್ರೀನಿವಾಸ ಪ್ರಸಾದ್, ತುಮಕೂರು-ಜಿ.ಎಸ್.ಬಸವರಾಜು, ದಕ್ಷಿಣ ಕನ್ನಡ-ನಳೀನ್ ಕುಮಾರ್ ಕಟೀಲ್, ಶಿವಮೊಗ್ಗ-ಬಿ.ವೈ.ರಾಘವೇಂದ್ರ.
ದಾವಣಗೆರೆ-ಜಿ.ಎಂ.ಸಿದ್ದೇಶ್ವರ್, ಧಾರವಾಡ-ಪ್ರಹ್ಲಾದ್ ಜೋಶಿ, ಹಾವೇರಿ- ಶಿವಕುಮಾರ್ ಉದಾಸಿ, ಬೀದರ್-ಭಗವಂತ್ ಖೂಬಾ, ಬಾಗಲಕೋಟೆ- ಪಿ.ಸಿ. ಗದ್ದಿಗೌಡರ್, ಬೆಳಗಾವಿ-ಸುರೇಶ್ ಅಂಗಡಿ ಅವರಿಗೆ ಟಿಕೆಟ್ ನೀಡಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೊಪ್ಪಳ, ರಾಯಚೂರು ಹಾಗೂ ಚಿಕ್ಕೋಡಿ ಸೇರಿದಂತೆ ಏಳು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಉತ್ತರ ಕನ್ನಡ, ವಿಜಯಪುರ, ಬೆಂ.ಉತ್ತರ ಕ್ಷೇತ್ರದ ಹಾಲಿ ಸಂಸದರನ್ನು ಬದಲಾವಣೆಯಾಗುವ ಮಾತುಗಳು ಕೇಳಿ ಬಂದಿತ್ತು. ಆದರೆ, ಅಂತಿಮವಾಗಿ ಹೈಕಮಾಂಡ್ ಅವರಿಗೆ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲೆ ಟಿಕೆಟ್ ನೀಡಿದೆ.