ವಿಜಯಪುರ: ಕ್ಯಾಂಟರ್-ಕ್ರೂಸರ್ ಮಧ್ಯೆ ಅಪಘಾತ; ಸ್ಥಳದಲ್ಲೇ 9 ಮಂದಿ ಮೃತ್ಯು
ವಿಜಯಪುರ, ಮಾ. 22: ಕ್ಯಾಂಟರ್ ಹಾಗೂ ಕ್ರೂಸರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಸಿಂದಗಿ ಬಳಿ ಈ ಅಪಘಾತ ಸಂಭವಿಸಿದೆ.
ಮೃತರನ್ನು ಸಾಗರ (25), ಚಾಂದಬಾಶಾ (24) ಅಜೀಮ್ (26), ಅಂಬರೀಶ್ (28) ಶಕೀರ ಕೆ.ಕೆ. (25), ಗುರು (32) ಶ್ರೀನಾಥ (30), ಯುನುಸ್ (27), ಮಂಗಸೂಬ್ (27) ಎಂದು ಗುರುತಿಸಲಾಗಿದೆ.
ಮೃತರು ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರವರಾಗಿದ್ದು, ಗೋವಾ ಪ್ರವಾಸ ಮುಗಿಸಿಕೊಂಡು ಸಿಂದಗಿ ಮೂಲಕ ಊರಿಗೆ ಮರಳುವ ವೇಳೆ ಈ ಅಪಘಾತ ಸಂಭವಿಸಿದ್ದು, ಆರು ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜಕನಕವಾಗಿದೆ.
ಗಾಯಾಳುಗಳನ್ನು ಸಿಂದಗಿ ಹಾಗೂ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸಿಂದಗಿ ಪೊಲೀಸರು ರಸ್ತೆ ಸಂಚಾರಕ್ಕೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.