ಕಾಂಗ್ರೆಸ್ ಹಿರಿಯ ನಾಯಕ ಮಾಲಕರೆಡ್ಡಿ ಬಿಜೆಪಿ ಸೇರ್ಪಡೆ
ಬೆಂಗಳೂರು, ಮಾ.22: ಹೈದರಾಬಾದ್ ಕರ್ನಾಟಕ ಹಿರಿಯ ನಾಯಕ ಡಾ.ಎ.ಬಿ.ಮಾಲಕರಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನಗರದಲ್ಲಿ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ವೇಳೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಾವುಟವನ್ನು ಮಾಲಕರೆಡ್ಡಿಗೆ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಮಾಲಕರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಜೊತೆಗೆ ಕೆಲಸ ಮಾಡುವುದು ಹೆಮ್ಮೆಯ ವಿಷಯ. ಆದರೆ, ನಾನು ಕಾಂಗ್ರೆಸ್ಸನ್ನು ಟೀಕೆ ಮಾಡುವುದಿಲ್ಲ. ಇಲ್ಲಿ ನಾನು ಯಾವುದೇ ನಕಾರಾತ್ಮಕ ವಿಷಯಗಳ ಬಗ್ಗೆ ಹೇಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯ ಉತ್ತಮ ಕಾರ್ಯಗಳನ್ನು ಕೆಪಿಸಿಸಿ ಸಭೆಯಲ್ಲೇ ಪ್ರಶಂಸಿಸಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಆರು ಬಾರಿ ಗೆದ್ದ ನಮ್ಮಂತಹ ಹಿರಿಯರನ್ನು ಕಡೆಗಣಿಸಿ ತಮ್ಮ ಮಗ ಪ್ರಿಯಾಂಕ ಖರ್ಗೆ ಅವರನ್ನು ಮಂತ್ರಿ ಮಾಡಿದ್ದಾರೆ. ಅಂತಹ ಚಿಕ್ಕ ಹುಡುಗನನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿ, ನಮ್ಮಂತಹವರು ಆತನ ಕೈಕೆಳಗೆ ಕೆಲಸ ಮಾಡುವಂತೆ ಮಾಡಿದರು. ಕಾಂಗ್ರೆಸ್ನಲ್ಲಿ ಶಾಸಕರು, ಜನಪ್ರತಿನಿಧಿಗಳು ಲೆಕ್ಕಕ್ಕೆ ಇಲ್ಲದಂತಾಗಿದ್ದು, ಸ್ವಾರ್ಥ ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕಿದರು.