ಐಟಿ ದಾಳಿಗೆ ಚುನಾವಣೆಯಲ್ಲಿ ಜನರಿಂದ ತಕ್ಕ ಉತ್ತರ: ಸಚಿವ ಸಾ.ರಾ.ಮಹೇಶ್
ಮೈಸೂರು,ಮಾ.28: ಚುನಾವಣೆ ಇರುವ ವೇಳೆಯಲ್ಲೇ ಈ ರೀತಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಷ್ಟೇ. ಈ ರಾಜಕೀಯ ಪ್ರೇರಿತ ದಾಳಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಕಿಡಿಕಾರಿದರು.
ಮೈಸೂರಿನಲ್ಲಿ ವಾಸ್ತವ್ಯವಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ತೆರಳುವ ವೇಳೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ ಮಹೇಶ್, ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ಮಾಡಿ ನಮ್ಮ ಪಕ್ಷವನ್ನು ಕುಗ್ಗಿಸುವ ಕಾರ್ಯ ಮಾಡಲು ಮುಂದಾಗಿದ್ದಾರೆ, ಆದರೆ ಅದು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರ ನ್ಯಾಯಯುತವಾಗಿ ದಾಳಿ ನಡೆಸಲಿ. ನಮ್ಮ ಪಕ್ಷದ ಬಲ ಇರುವ ಮೈಸೂರು, ಮಂಡ್ಯ, ಹಾಸನ ಹಾಗೂ ಮಂಗಳೂರಿನಲ್ಲಿ ದಾಳಿ ನಡೆಸಿರುವುದು ರಾಜ್ಯ ಹಾಗೂ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ರಾಜಕೀಯ ಪ್ರೇರಿತ ದಾಳಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ನಮ್ಮ ಮೇಲೆ ಈ ರೀತಿಯ ದಾಳಿಯನ್ನು ಮುಂಚಿತವಾಗಿಯೇ ನಡೆಸಬಹುದಿತ್ತು, ಚುನಾವಣೆ ಇರುವ ವೇಳೆಯಲ್ಲೇ ಈ ರೀತಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಷ್ಟೇ. ಯುವ ಮತದಾರರಿಗೆ ಇವೆಲ್ಲ ಅರ್ಥವಾಗಲಿದೆ ಎಂದರು.