ಅಪ್ಪನಿಗೆ ಹುಟ್ಟಿದ್ರೆ ಎದುರಿಗೆ ನಿಂತು ಟೀಕೆ ಮಾಡಿ: ಸಚಿವ ತಮ್ಮಣ್ಣ
ಮಂಡ್ಯ,ಮಾ.30: ಅಪ್ಪನಿಗೆ ಹುಟ್ಟಿದ್ರೆ ಎದುರಿಗೆ ನಿಂತು ಟೀಕೆ ಮಾಡ್ರೀ ಎಂದು ಮದ್ದೂರು ಎಳನೀರು ಮಾರುಕಟ್ಟೆಯಲ್ಲಿ ಟೀಕಾಕಾರರಿಗೆ ಪಂಥಾಹ್ವಾನ ನೀಡುವ ಮೂಲಕ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಶನಿವಾರ ಮದ್ದೂರು ಎಳನೀರು ಮಾರುಕಟ್ಟೆಗೆ ಭೇಟಿ ಇತ್ತ ಸಂದರ್ಭದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೀವು ಟೀಕೆ ಮಾಡೋದು ನಾನು ಕೇಳಿದ್ದೇನೆ. ತಾಕತ್ತಿದ್ರೆ, ಅಪ್ಪನಿಗೆ ಹುಟ್ಟಿದ್ರೆ ಬಂದು ಎದುರಿಗೆ ನಿಂತು ಟೀಕೆ ಮಾಡಿ. ಮಾರುಕಟ್ಟೆ ಚರಿತ್ರೆ ನನಗೆ ಗೊತ್ತು. ಹಣ, ಮಜಾ ಮಾಡ್ಕೊಂಡು ಟೀಕೆ ಮಾಡ್ತೀರಾ ಎಂದು ತಮ್ಮಣ್ಣ ಹರಿಹಾಯ್ದಿದ್ದಾರೆ.
ನಾನು ಕೋಟಿಗಟ್ಟಲೆ ಹಣವನ್ನು ತಂದು ಮಾರುಕಟ್ಟೆ ಅಭಿವೃದ್ಧಿ ಮಾಡಿದ್ದೇನೆ. ಹಣ ಮಾಡಿ ಮಜಾ ಮಾಡುತ್ತಾ ನಮ್ಮ ವಿರುದ್ಧವೇ ಟೀಕೆ ಮಾಡ್ತೀರಾ. ಹಿಂದೆ ನಿಂತು ಮಾತನಾಡುವುದಲ್ಲ. ಟಿವಿಯವರಿಗೆ ಹೇಳಿಕೆ ನೀಡುವುದಲ್ಲ. ಎದುರಿಗೆ ನಿಂತು ಮಾತನಾಡಿ ಎಂದು ಯಾರೊಬ್ಬರ ಹೆಸರನ್ನೂ ಪ್ರಸ್ತಾಪಿಸದೆ ಹರಿಹಾಯ್ದಿದ್ದಾರೆ.