ಕಾಂಗ್ರೆಸ್ ಸಭೆಯಲ್ಲಿ ಸುಮಲತಾ ಪರ ಜೈಕಾರ
ಮಂಡ್ಯ,ಮಾ.30: ಮೈತ್ರಿ ಅಭ್ಯರ್ಥಿ ಪರ ಬೆಂಬಲ ಕೋರುವ ಸಂಬಂಧ ಕರೆದಿದ್ದ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಜೈಕಾರ ಮೊಳಗಿದ್ದು, ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷರನ್ನು ಬೇಸ್ತು ಬೀಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರುತ್ತಿದ್ದಂತೆಯೇ ಸ್ಥಳೀಯ ಹಲವು ಕಾಂಗ್ರೆಸ್ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಚುನಾವಣಾ ಪ್ರಕ್ರಿಯೆ ಆರಂಭದಿಂದಲೂ ಸ್ಥಳೀಯ ಕಾಂಗ್ರೆಸ್ಸಿಗರು ಮೈತ್ರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು.
ಬೆಂಬಲವಿರಲಿ, ಅಸಮಾಧಾನ ಶಮನ ಮಾಡುವುದೂ ದುಸ್ತರವಾದ್ದರಿಂದ ಜಿಲ್ಲಾಧ್ಯಕ್ಷರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಅಗ್ರಹಾರ ಶಿವರಾಮ್, ಶ್ರೀಕಂಠು, ತಮ್ಮಣ್ಣ ಸೇರಿದಂತೆ ಮೈತ್ರಿ ಅಭ್ಯರ್ಥಿಗೆ ಧಿಕ್ಕಾರ ಕೂಗಿದವರಲ್ಲಿ ಪ್ರಮುಖರಾಗಿದ್ದು, ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುವುದಾಗಿಯೂ ಘೋಷಿಸಿದರು.
ಸಭೆಯಲ್ಲಿ ಹಿರಿಯ ಮುಖಂಡ ಎಂ.ಪುಟ್ಟೇಗೌಡ, ಗಂಗಾಧರ್, ಪಾಲಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದರು.