ಮುಖ್ಯಮಂತ್ರಿಯಿಂದ ಅಧಿಕಾರ ದುರುಪಯೋಗ: ಬಿಎಸ್ವೈ ಆರೋಪ
ಬೆಳಗಾವಿ, ಎ.1: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಅಧಿಕಾರ ಬಳಸಿಕೊಂಡು ಮಗನ ನಾಮಪತ್ರದಲ್ಲಿ ಅಕ್ರಮಕ್ಕೆ ಮುಂದಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ನ್ಯಾಯಾಲಯದಲ್ಲಿ ರದ್ದಾಗುವ ವಿಶ್ವಾಸವಿದೆ ಎಂದರು.
ಮಂಡ್ಯದಲ್ಲಿ ನಿಖಿಲ್ಗೆ ಸೋಲುವ ಭೀತಿ ಎದುರಾಗಿದೆ. ಆದುದರಿಂದ, ಹತಾಶರಾಗಿ ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗಗಳನ್ನು ಅನುಸರಿಸಲು ಮುಂದಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಈ ನಾಮಪತ್ರ ವಿಚಾರದಲ್ಲಿ ಅಕ್ರಮವಾಗಿರುವ ಕುರಿತು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಅಕ್ರಮ ನಡೆಸಿರುವ ಚುನಾವಣಾಧಿಕಾರಿಯನ್ನು ವರ್ಗಾವಣೆ ಮಾಡಿ ನಿಷ್ಪಕ್ಷಪಾತವಾದ ಅಧಿಕಾರಿಯನ್ನು ಮಂಡ್ಯದಲ್ಲಿ ನೇಮಿಸಬೇಕು. ಇವರು ಮಾಡುತ್ತಿರುವ ಅಕ್ರಮಗಳ ಕುರಿತು ಮಂಡ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದರು.