'ಚುನಾವಣೆ ಗೆದ್ದ ಬಳಿಕ ಬಿಜೆಪಿ ಸೇರ್ಪಡೆ' ಎಂಬ ಸುದ್ಧಿಗಳ ಬಗ್ಗೆ ಸುಮಲತಾ ಪ್ರತಿಕ್ರಿಯೆ
ಮಂಡ್ಯ, ಎ.5: ನಾನು ಸ್ವತಂತ್ರ ಅಭ್ಯರ್ಥಿಯಾಗಿದ್ದು, ಗೆದ್ದ ಮೇಲೆ ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಮಲತಾ ಅಂಬರೀಷ್, ಈ ಸಂಬಂಧ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಾನು ಬಿಜೆಪಿ ಸೇರ್ಪಡೆ ವಿಚಾರ ಕೇವಲ ಊಹಾಪೋಹ. ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಶುಕ್ರವಾರ ನಗರದ ಮುಸ್ಲಿಂ ಮುಖಂಡರ ಮನೆಗೆ ಭೇಟಿ ನೀಡಿ ಮನವರಿಕೆ ಮಾಡಿದರು.
'ಬಿಜೆಪಿ ಸೇರಿ ಎಂದು ಸುಮಲತಾರನ್ನು ಒತ್ತಾಯಿಸಿಲ್ಲ, ಗೆದ್ದ ಮೇಲೆ ಬಿಜೆಪಿ ಸೇರೋದು ಬಿಡೋದು ಅವರ ವಿವೇಚನೆಗೆ ಬಿಟ್ಟಿದ್ದು' ಎಂದು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡಿ ಬಿಜೆಪಿ ನನಗೆ ಬೆಂಬಲ ನೀಡಿದೆ ಎಂದು ಅವರು ವಿವರಿಸಿದರು.
ಬಿಜೆಪಿಗೆ ಹೋಗಬೇಕೆನಿಸಿದ್ದರೆ ಈಗಲೇ ಹೋಗುತ್ತಿದ್ದೆ. ನನಗೆ ಬೇಕಾದಷ್ಟು ಆಫರ್ ಗಳು ಬಂದಿದ್ದವು. ಆದರೆ, ಅದೆಲ್ಲವನ್ನೂ ತಳ್ಳಿಹಾಕಿದ್ದೇನೆ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. ಮಂಡ್ಯ ಜನರ ಒತ್ತಾಯದಂತೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇನೆ. ಮುಂದೆ ಏನೇ ನಿರ್ಧಾರ ಮಾಡಿದರೂ ನಿಮ್ಮನ್ನು ಕೇಳಿ ತೀರ್ಮಾನಿಸುತ್ತೇನೆ ಎಂದು ಅವರು ಭರವಸೆ ನೀಡಿದರು.