ಮೈಸೂರು: ಬಿಎಸ್ಪಿ ಸಮಾವೇಶಕ್ಕೆ ಚಾಲನೆ
ಮೈಸೂರು, ಎ.10: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಎಸ್ಪಿ ಆಯೋಜಿಸಿದ್ದ ಸಮಾವೇಶವು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಮಧ್ಯಾಹ್ನ ಆರಂಭಗೊಂಡಿದೆ.
ಸಮಾವೇಶಕ್ಕೆ ಆಗಮಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ಮಾಯಾವತಿಯವರಿಗೆ ಗಂಧದ ಆನೆಯೊಂದನ್ನು ನೀಡುವ ಮೂಲಕ ಸ್ವಾಗತಿಸಲಾಯಿತು.
ನಂತರ ಮಾಯಾವತಿ ಅವರ ಸ್ವಾಗತಕ್ಕಾಗಿಯೇ ಸಂಯೋಜಿಸಿದ್ದ ಹಾಡಿನ ನೃತ್ಯಕ್ಕೆ ಮನಸೋತ ಮಾಯಾವತಿ ಹಾಡನ್ನು ಕೇಳಿ ಸಂತೋಷದಿಂದ ಆನಂದಬಾಷ್ಪ ಸುರಿಸಿದರು
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎನ್.ಮಹೇಶ್, ಬಿಎಸ್ಪಿ ಪಕ್ಷಕ್ಕೆ ಮತ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾಗುತ್ತದೆ. ಇದರಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂಬುದು ಮನುವಾದಿಗಳು ಹೂಡಿರುವ ಷಡ್ಯಂತ್ರ. ಬಿಜೆಪಿ ಗೆಲ್ಲುತ್ತದೆ ಎಂಬ ಭಾವನೆ ಇವರಿಗಿದ್ದರೆ ಬಿಎಸ್ಪಿಗೆ ಮತ ನೀಡಲಿ. ಅದು ಬಿಟ್ಟು ಜನರಿಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುವುದನ್ನು ಬಿಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ಸಿಗರು ಬಿಎಸ್ಪಿವಿರುದ್ಧ ಪಿತೂರಿ ನಡೆಸುತ್ತಿದ್ದು, ಅದಕ್ಕೆ ಬಹುಜನರು ತಲೆಕೆಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.