ಮೋದಿ ಹೆಲಿಕಾಪ್ಟರಿನಿಂದ ಇಳಿಸಿ ಸಾಗಿಸಲಾದ 'ರಹಸ್ಯ ಕಪ್ಪು ಪೆಟ್ಟಿಗೆ'ಯ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಬೆಂಗಳೂರು: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹೆಲಿಕಾಪ್ಟರಿನಿಂದ ಶಂಕಾಸ್ಪದ ಕಪ್ಪು ಪೆಟ್ಟಿಗೆಯನ್ನು ಪ್ರಧಾನಿಯ ಇಬ್ಬರು ಭದ್ರತಾ ಸಿಬ್ಬಂದಿ ಅಲ್ಲೇ ನಿಂತಿದ್ದ ಖಾಸಗಿ ಕಾರಿನತ್ತ ಸಾಗಿಸಿದ ಘಟನೆಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಘಟಕ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾಂಗ್ರೆಸ್ ವಕ್ತಾರ ಆನಂದ್ ಶರ್ಮ ಕೂಡ ಈ ಘಟನೆಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರಲ್ಲದೆ ಪ್ರಧಾನಿ ಈ ನಿಟ್ಟಿನಲ್ಲಿ ಸ್ಪಷ್ಟನೆ ನೀಡಬೇಕೆಂದಿದ್ದಾರೆ. ಆ ಪೆಟ್ಟಿಗೆಯಲ್ಲೇನಿತ್ತು ಎಂಬುದನ್ನೂ ಚುನಾವಣಾ ಆಯೋಗ ದೃಢಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
"ಪ್ರಧಾನಿಯ ಹೆಲಿಕಾಪ್ಟರ್ ಜತೆ ಮೂರು ಇತರ ಹೆಲಿಕಾಪ್ಟರುಗಳೂ ಇದ್ದುದನ್ನು ನಾವು ನೋಡಿದ್ದೇವೆ. ಭೂಸ್ಪರ್ಶವಾದ ಕೂಡಲೇ ಕಪ್ಪು ಬಣ್ಣದ ಪೆಟ್ಟಿಗೆಯನ್ನು ಪ್ರಧಾನಿಯ ಎಸ್ಪಿಜಿ ಪಡೆಯ ಭಾಗವಾಗಿರದೇ ಇದ್ದ ಖಾಸಗಿ ಕಾರಿನಲ್ಲಿ ಅದನ್ನು ಸಾಗಿಸಲಾಯಿತು,'' ಎಂದು ಶರ್ಮ ಆರೋಪಿಸಿದ್ದಾರೆ.
ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಈ ಘಟನೆಯ 15 ಸೆಕೆಂಡ್ ಅವಧಿಯ ವೀಡಿಯೋವನ್ನು ಪೋಸ್ಟ್ ಮಾಡಿದ್ದರಲ್ಲದೆ ಚುನಾವಣಾ ಆಯೋಗ ತನಿಖೆ ನಡೆಸಿ ಈ ಪೆಟ್ಟಿಗೆಯೊಳಗೇನಿದೆ ಹಾಗೂ ಅದನ್ನು ಸಾಗಿಸಲಾದ ವಾಹನ ಯಾರದ್ದೆಂದು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದರಲ್ಲದೆ ತಮ್ಮ ಟ್ವೀಟ್ ಜತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನೂ ಟ್ಯಾಗ್ ಮಾಡಿದ್ದರು.