ಎಂ.ಬಿ.ಪಾಟೀಲ್ ರಿಗೆ ಬುದ್ಧಿ ಕಡಿಮೆ: ರಮೇಶ ಜಿಗಜಿಣಗಿ
ವಿಜಯಪುರ, ಎ.15: ಗೃಹಸಚಿವ ಎಂ.ಬಿ.ಪಾಟೀಲ್ ಅವರಿಗೆ ಬುದ್ಧಿ ಕಡಿಮೆ. ಅವರು ಇನ್ನೂ ಸಣ್ಣವರು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಎಂ.ಬಿ. ಪಾಟೀಲ್ ತನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಗಜಿಣಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಎಂ.ಬಿ. ಪಾಟೀಲ್ ತಂದೆಯವರ ಜೊತೆಗೆ ನಾನು ರಾಜಕೀಯ ಮಾಡಿದ್ದೀನಿ. ಆದರೆ ಎಂಬಿಪಿಗೆ ಬುದ್ಧಿ ಹೇಳುವಷ್ಟು ನಾನಿಲ್ಲ. ಅವರಿಗೆ ದೇವರು ಬುದ್ಧಿ ಹೇಳ್ತಾನೆ ಎಂದರು.
ಈ ಚುನಾವಣೆಯಲ್ಲಿ ರಮೇಶ ಜಿಗಜಿಣಗಿಗೆ ವಿಶ್ರಾಂತಿ ಸಿಗಲಿದೆ ಎಂಬ ಎಂಬಿಪಿ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಾಟೀಲ್ ಕೂಡಾ ರಾಜಕೀಯ ಬಿಟ್ಟು ಒಂದು ದಿನ ಮನೆಗೆ ಹೋಗುವರು ಇದ್ದಾರೆ. ಇನ್ನು ನನ್ನ ಎದುರು ಹೆಣ್ಣು ಮಗಳು ನಿಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ್ ಗೆದ್ದರೆ ನನಗೂ ಖುಷಿ ಆಗುತ್ತದೆ. ಬೇಕಿದ್ದರೆ ನನ್ನನ್ನು ಸೋಲಿಸಲಿ ಎಂದು ಟಾಂಗ್ ನೀಡಿದರು.
ಶಾಸಕ ನಡಹಳ್ಳಿ ಮೇಲೆ ಎಂಬಿಪಿ ಬೆಂಬಲಿಗರು ಹಲ್ಲೆಗೆ ಯತ್ನಿಸಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಜಿಗಜಿಣಗಿ, ಆ ದುರ್ಘಟನೆ ಆಗಬಾರದಿತ್ತು. ಅದನ್ನು ಅಲ್ಲಿಗೆ ಬಿಟ್ಟುಬಿಡಿ. ನಾನು ನಿಮಗೆ ಸುಲಭದಲ್ಲಿ ಸಿಗುತ್ತೇನೆ ಅಂತಾ ಎಲ್ಲಾನು ನನಗೆ ಕೇಳ್ತೀರಾ ಎಂದು ಕೋಪಗೊಂಡರು.